ಕರ್ನಾಟಕ ಸರ್ಕಾರವು ಕೈಬಿಡಲಾದ, ರಕ್ಷಿಸಿದ, ವಶಪಡಿಸಿಕೊಂಡ, ಅನಾರೋಗ್ಯ ಮತ್ತು ಗಾಯಗೊಂಡ ಜಾನುವಾರುಗಳನ್ನು ಸಂರಕ್ಷಿಸಲು ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಗೋಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ 2021 ಅನ್ನು ತಂದಿತು, ಈ ಯೋಜನೆ ಅಡಿ ಸರ್ಕಾರವು ಆರ್ಥಿಕ ಸಹಾಯದ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುತ್ತಿದೆ.
ದನಗಳ ಸಂಪತ್ತನ್ನು ಸಂರಕ್ಷಿಸುವ ಪ್ರಯತ್ನದ ಮುಂದಿನ ಹಂತವಾಗಿ, ಸರ್ಕಾರವು 'ಪುಣ್ಯಕೋಟಿ ದತ್ತು ಯೋಜನೆ'ಯನ್ನು ಘೋಷಿಸಿದೆ, ಇದು ಗೋವನ್ನು ನೋಡಿಕೊಳ್ಳಲು ಮತ್ತು ಗೋಶಾಲೆಗಳನ್ನು ಮಾಡಲು ಸರ್ಕಾರದೊಂದಿಗೆ ಕೈಜೋಡಿಸಲು ಜನರಿಗೆ ಅವಕಾಶವನ್ನು ನೀಡುವ ವಿಶಿಷ್ಟ ಕಾರ್ಯಕ್ರಮವಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯನ್ನು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ದತ್ತು ತೆಗೆದುಕೊಳ್ಳಲು ವ್ಯಾಪಕವಾಗಿ ಪ್ರಚುರ ಪಡಿಸಲು ಹಾಗೂ ಎಲ್ಲಾ ವರ್ಗದ ಸಾರ್ವಜನಿಕರಿಗೆ ಈ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಮತ್ತು ಸ್ಫೂರ್ತಿ ತುಂಬಲು ರಾಜ್ಯದ ಅತ್ಯಂತ ಜನಪ್ರಿಯ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ಪಶುಸಂಗೋಪನೆ ಇಲಾಖೆಯ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಈ ಕಾರ್ಯವನ್ನು ನಿರ್ವಹಿಸಲು ಸದರಿಯವರಿಗೆ ಯಾವುದೇ ರೀತಿಯ ಸಂಭಾವನೆಯನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಪುಣ್ಯಕೋಟಿ ರಾಯಭಾರಿಯಾಗಲು ಹೆಮ್ಮೆಪಡುತ್ತೇನೆ. ಜಿಲ್ಲೆಗೊಂದು ಗೋವಿನಂತೆ 31 ಗೋವುಗಳನ್ನು ದತ್ತು ಪಡೆಯುತ್ತಿದ್ದೇನೆ.ಈ ಗೌರವ ಮತ್ತು ಅವಕಾಶ ನೀಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಸಚಿವರಾದ ಪ್ರಭು ಚೌವ್ಹಾಣ್ ಅವರಿಗೆ ಹೃದಯಪೂರ್ವಕ ಧನ್ಯ ಎಂದು ಸುದೀಪ್ ಟ್ವಿಟ್ ಮೂಲಕ ತಿಳಿಸಿದ್ದಾರೆ.