ಬೈಲಹೊಂಗಲ : ಕಾನೂನು ಬದ್ಧವಾಗಿ ದಾಖಲೆಗಳನ್ನು ಸಂಗ್ರಹಿಸಿಡುವ ಜವಾಬ್ದಾರಿ ಮುಖ್ಯಕಾರ್ಯದರ್ಶಿಗಳ ಮೇಲಿದೆ ಎಂದು ಸೌಹಾರ್ದ ಸಹಕಾರಿಯ ಜಿಲ್ಲಾ ಸಂಯೋಜಕ ರಾಚಯ್ಯ ಹಿರೇಮಠ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸೌಹಾರ್ದ ಸಹಕಾರಿಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಳಗಾವಿಯಿಂದ ಹಮ್ಮಿಕೊಂಡಿದ್ದ ಬೈಲಹೊಂಗಲ ಪಟ್ಟಣದ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯದರ್ಶಿ ಸಭೆಯಲ್ಲಿ ಅವರು ಮಾತನಾಡಿದರು.
ಕಾನೂನು ಬದ್ಧವಾಗಿ ವ್ಯವಹಾರ-ವಹಿವಾಟ ನಡೆಸುವ ಜವಬ್ದಾರಿ ಮುಖ್ಯ ಕಾರ್ಯದರ್ಶಿಗಳ ಮೇಲಿದೆ. ಸಮಯಕ್ಕೆ ಸರಿಯಾಗಿ ಲೆಕ್ಕಪರಿಶೋಧನೆ ಮಾಡಿಸಬೇಕು. ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಿರುವ ಸಹಕಾರಿಗಳು ಚುನಾವಣೆಗಳನ್ನು ಸರಿಯಾದ ಸಮಯಕ್ಕೆ ಮಾಡಬೇಕು.
ಸುಸ್ತಿದಾರರ ಪಟ್ಟಿಯನ್ನು ತಯಾರಿಸಿ ದಾವೆಯನ್ನು ದಾಖಲು ಮಾಡಬೇಕು. ಸಹಕಾರಿಯ ಬೈಲಾದಲ್ಲಿ ಸಂಘ ಅಂತ ತಿದ್ದು ಪಡೆ ಮಾಡಿಕೊಳ್ಳಬೇಕು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಇದರಿಂದ ಸೌಹಾರ್ದ ಸಹಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಹಾರ ಪಡೆದುಕೊಳ್ಳಬಹುದು. ಏನೇ ಮಾಹಿತಿ ಬೇಕಾದರೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪಟ್ಟಣದ ಎಲ್ಲ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.