ನಾಳೆಯಿಂದ ಕನ್ನೇರಿ ಮಠದಲ್ಲಿ ಮಹಾಸಮಾವೇಶ

  • shivaraj bandigi
  • 15 Jan 2024 , 1:11 PM
  • Belagavi
  • 477

ಬೆಳಗಾವಿ :

ಕೊಲ್ಲಾಪುರ ಸಮೀಪವಿರುವ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ಜ.12 ಮತ್ತು 13 ರಂದು ಸಾವಯವ ಕೃಷಿ, ಬದುಕಿಗೆ ಒತ್ತು ನೀಡುವ ಉದ್ದೇಶದಿಂದ ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು ಎಂಬ ಮಹಾ ಸಮಾವೇಶ ನಡೆಸಲಾಗುತ್ತಿದೆ ಎಂದು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜಂಟಿಯಾಗಿ ತಿಳಿಸಿದ್ದಾರೆ.

ಸಾವಯವ ಕೃಷಿ ಪರಿವಾರ ಮತ್ತು ಸುಭೀಕ್ಷ್ಯಾ ಆರ್ಗ್ಯಾನಿಕ್ ಫಾರ್ಮಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗಳು ಈ ಸಮಾವೇಶವನ್ನು ಸಂಘಟಿಸುತ್ತಿವೆ. ಈ ಸಮಾವೇಶದಲ್ಲಿ ನಾಡಿನ ಎಲ್ಲ ಮಠಾಧೀಶರು, ಸಂತರು, ಧರ್ಮದರ್ಶಿಗಳು,‌ ಶಿಕ್ಷಣ ತಜ್ಞರು, ವಿಜ್ಞಾನಿಗಳು, ತೋಟಗಾರಿಕೆ‌ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ರೈತರು ಭಾಗವಹಿಸಲಿದ್ದಾರೆ.

ಮಹಾಸಮಾವೇಶವು ಸಾವಯವ ಕೃಷಿ, ಜೀವ ವೈವಿಧ್ಯ, ಗ್ರಾಮ ಜೀವನ ಸುಧಾರಣೆ, ಗೋ‌ ಸಂರಕ್ಷಣೆ, ಪರಿಸರ ಸಂರಕ್ಷಣೆ, ಸಾವಯವ ಮಾರುಕಟ್ಟೆ, ಗ್ರಾಮೀಣ ಯುವ ಜನತೆಯಲ್ಲಿ ಕೃಷಿ ಮಹತ್ವದ ಅರಿವು, ಅವಿವಾಹಿತ ಕೃಷಿ ಕ್ಷೇತ್ರದ ಯುವಕರಿಗೆ ಕಂಕಣ ಭಾಗ್ಯ, ಚಿಕ್ಕ‌ ಹಿಡುವಳಿಯಲ್ಲಿ ಚೊಕ್ಕ ಜೀವನ, ಅಮೃತ ದಾಸೋಹ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News