ಬೆಳಗಾವಿ :
ಬೆಳಗಾವಿ ಖಾವು ಕಟ್ಟಾದಲ್ಲಿ ನಡೆದ ಭ್ರಷ್ಟಾಚಾರ, ಮಳಿಗೆ ಹಂಚಿಕೆಯ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇದೆ. ಈಗ ತನಿಖೆ ನಡೆಯುತ್ತಿದ್ದು, ತನಿಖಾ ಹಂತದಲ್ಲಿಯೇ ಶಾಸಕ ಅಭಯ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಅವರ ಮೇಲೆ ನಗರ ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಖಾವು ಕಟ್ಟಾದಲ್ಲಿನ ನಡೆದ ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಯಾವುದೇ ಜಾತಿಯ ವಿರುದ್ಧ ಅಲ್ಲ. ಖಾವು ಕಟ್ಟಾದಲ್ಲಿ ನಿರ್ಗತಿಕರ, ವಿಧವೆಯರಿಗೆ, ಕಡುಬಡವರಿಗೆ ಮಳಿಗೆ ಹಂಚಿಕೆ ಮಾಡಬೇಕು. ಇದು ಸರಕಾರದ ಯೋಜನೆ. ಆದರೆ ದಕ್ಷಿಣ ಶಾಸಕ ಅಭಯ ಪಾಟೀಲ ಅವರ ಕನಸ್ಸಿನ ಯೋಜನೆ ಅಲ್ಲ. ಸುಮಾರು 26 ಜನ ಟ್ರೇಡ್ ಲೈಸನ್ಸ್ ಇಲ್ಲದೆ ಮಳಿಗೆಯನ್ನು ನಡೆಸುತ್ತಿದ್ದಾರೆ. ಅದರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯರಾದ ಜಯಂತ ಜಾಧವ, ಮಂಗೇಶ ಪವಾರ್, ಶಾಸಕ ಅಭಯ ಪಾಟೀಲ ಕಚೇರಿಯಲ್ಲಿ ಕೆಲಸ ಮಾಡುವ ಕುಟುಂಬಸ್ಥರಿಗೆ ಮಳಿಗೆ ಹಂಚಿಕೆ ಮಾಡಿ ಕಡು ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪಾಲಿಕೆ ಸದಸ್ಯ ದೀಪಕ ಜಮಖಂಡಿ ಅವರು ನೀಡಿದ ದೂರಿನ ಮೇಲೆ ನಾವು ಹೋರಾಟ ಮಾಡುತ್ತಿದ್ದೇವೆ. ಹೋರಾಟಗಾರರಿಗೆ ಬೇದರಿಕೆ ಹಾಕುತ್ತಿದ್ದಾರೆ. ಕೋಮು, ಗಲಭೆಗೆ ಶಾಸಕ ಅಭಯ ಪಾಟೀಲ ಪ್ರಚೋದನೆ ನೀಡುತ್ತಿದ್ದಾರೆ. ಎಲ್ಲರಿಗೂ ಮೆಸೇಜ್ ಕಳುಹಿಸಿದ್ದಾರೆ. ಅವರ ಮೇಲೆ ಸೈಬರ್ ಕ್ರೈಮ್ ನಲ್ಲಿ ನಗರ ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ನಮ್ಮ ಹೋರಾಟ ಖಾವು ಕಟ್ಟಾ ನೆಲಸಮ ಮಾಡುವುದಿಲ್ಲ. ಬದಲಾಗಿ ನಿರ್ಗತಿಕರಿಗೆ, ದಲಿತರಿಗೆ ನೀಡಬೇಕು. ಅದನ್ನು ಬಿಟ್ಟು ಶಾಸಕ ಅಭಯ ಪಾಟೀಲಗೆ ಭಯ ಏಕೆ ಎಂದು ಪ್ರಶ್ನಿಸಿದ ಅವರು, ಶಾಸಕ ಅಭಯ ಪಾಟೀಲರು ಹಿಂದುನಾ ? ಜಾಗೋ ಹಿಂದು ಎಂದು ಎಲ್ಲರಿಗೂ ವಾಟ್ಸಪ್ ಮಾಡಿದ್ದಾರೆ. ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಶಹಾಪುರ, ರವಿವಾರಪೇಟ್, ಖಾದರವಾಡಿ ಹಾಗೂ ಉದ್ಯಮಬಾಗ ಹಿಂದುಗಳ ಮೇಲೆ ಎಷ್ಟು ದಬ್ಬಾಳಿಕೆ ಮಾಡಿದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ಇಲ್ಲಿನ ಹಿಂದುಗಳು ಹೋರಾಟ ಮಾಡುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪೋಸ್ಟ್ ಮಾಡಿದರೆ ಕ್ರಮ ಕೈಗೊಳ್ಳುವ ಪೊಲೀಸರು. ಸ್ವತಃ ಶಾಸಕ ಅಭಯ ಪಾಟೀಲ ಅವರ ಮೊಬೈಲ್ ನಿಂದ ಎಲ್ಲರಿಗೂ ಕೋಮು ಗಲಭೆ ಪ್ರಚೋದನೆ ನೀಡುವ ಮೆಸೇಜ್ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡುತ್ತೇವೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದರು.
ಖಾವು ಕಟ್ಟಾದಲ್ಲಿನ ಮಳಿಗೆಗಳು ಸರಿಯಾಗಿ ಹಂಚಿಕೆಯಾಗಿಲ್ಲ. ಅದನ್ನು ಇನ್ನೊಂದು ಬಾರಿ ಟೆಂಡರ್ ಕರೆದು ಅರ್ಹ ಫಲನಾಭವಿಗಳಿಗೆ ಹಂಚಿಕೆಯಾಗಬೇಕು ಎಂದು ಆಗ್ರಹಿಸಿದರು.