ಕಿತ್ತೂರ : ಚನ್ನಮ್ಮನ ಕಿತ್ತೂರ ತಾಲೂಕಿನ ತುರಮರಿ ಗ್ರಾಮದಲ್ಲಿ ಶುಕ್ರವಾರ ಶ್ರದ್ಧೆಯಿಂದ ಮೊಹರಂ ಹಬ್ಬ ಆಚರಿಸಲಾಯಿತು. ಬೆಳಗ್ಗೆಯಿಂದಲೇ ದರ್ಗಾಗಳಲ್ಲಿ ಅಲಾಯಿ, ಪಂಜಾ, ಡೋಲಿಗಳನ್ನು ಎಬ್ಬಿಸಿ ಕೆಂಡ ಹಾಯ್ದ ಬಳಿಕ ಮುಸ್ಲಿಂ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ದರ್ಗಾಗಳ ಮುಖಂಡರು ಸೇರಿಕೊಂಡು ಸೀಮಿತ ಪ್ರದೇಶದಲ್ಲಿ ಮೆರವಣಿಗೆ ಮಾಡಿದರು. ಯುವಕರು ಪಂಜಾಗಳ ಮುಂದೆ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲವೆಡ ಶೋಕಾಚರಣೆ ಅಂಗವಾಗಿ ದೇಹ ದಂಡಿಸಿಕೊಳ್ಳುವ ಸಂಪ್ರದಾಯವೂ ನಡೆಯಿತು.
ಮಹಿಳೆಯರು ದೇವರನ್ನು ಪ್ರತಿಷ್ಠಾಪಿಸಿದ ಸ್ಥಳಗಳಿಗೆ ಹೋಗಿ ಎಡೆ ನೀಡಿದರು. ಹಿಂದೂಗಳು ಕೂಡ ಕಾಯಿ, ಕರ್ಪೂರ, ಊದು, ಎಣ್ಣೆದೀಪ ಹಾಗೂ ಮಾದಲಿ ಎಡೆ ಅರ್ಪಿಸಿದರು. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯರೂ ಪಾಲ್ಗೊಂಡಿದ್ದರು.