ಗೃಹಲಕ್ಷ್ಮೀ ಅರ್ಜಿಗೆ ಯಾರೂ ಹಣ ಕೊಡಬೇಡಿ : ಲಕ್ಷ್ಮೀ ಹೆಬ್ಬಾಳಕರ್ ಮನವಿ

  • Shivaraj Bandigi
  • 14 Jan 2024 , 11:37 PM
  • Belagavi
  • 257

ಬೆಳಗಾವಿ : ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೂ ದುಡ್ಡು ಕೊಡಬಾರದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಒಂದು ರೂ. ಕೂಡ ಖರ್ಚಿಲ್ಲದೆ ಮಹಿಳೆಯರಿಗೆ ಹಣ ನೀಡಬೇಕೆನ್ನುವುದು ಸರಕಾರದ ಉದ್ದೇಶ. ಹಾಗಾಗಿ ಸೇವೆ ನೀಡುವ ಕೇಂದ್ರ ಮತ್ತು ವ್ಯಕ್ತಿಗಳಿಗೆ ಸರಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ 20 ರೂ. ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ಬಂದು ಹಣ ಕೊಡಿ ಎಂದು ಕೇಳಿದರೆ ಕೊಡಬೇಡಿ ಎಂದು ವಿನಂತಿಸಿದರು.

ಕೆಲವು ಕಡೆ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೇನೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಮಹಿಳೆಯರ ಖಾತೆಗೆ ಹಣ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕೆ ಯಾರೂ ಅವಕಾಶ ಕೊಡಬಾರದು.

ಅರ್ಜಿ ಸಲ್ಲಿಸಲು ಯಾವುದೇ ಸಮಯ ಮಿತಿ ಇಲ್ಲದಿರುವುದರಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗುವುದು. ಹಾಗಾಗಿ ಯಾರೂ ಹಣ ಕಳೆದುಕೊಳ್ಳಬಾರದು ಎಂದು ಹೇಳಿದರು.

 ಕಳೆದ 4 ತಿಂಗಳಿನಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಲು ಫೌಡರ್ ಪೂರೈಕೆಯಾಗುತ್ತಿಲ್ಲ. ದರ ಹೆಚ್ಚಳವಾಗಿದ್ದರಿಂದ ಹಾಲು ಪೂರೈಸಲು ಸಾಧ್ಯವಿಲ್ಲ ಎಂದು ಕೆಎಂಎಫ್ ನವರು ನಿಲ್ಲಿಸಿದ್ದಾರೆ.

ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೆಬ್ಬಾಳಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂತಾಪ

ತಾವು ಶಾಸಕರಾಗಿದ್ದ ಅವಧಿಯಲ್ಲಿ ತಮ್ಮ ಆಪ್ತ ಸಹಾಯಕರಾಗಿದ್ದ ಬೆಳಗಾವಿಯ ಗ್ರೇಡ್ 2 ತಹಸಿಲ್ದಾರ ಅಶೋಕ ಮಣ್ಣಿಕೇರಿ ಅಕಾಲಿಕ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಸೂಚಿಸಿದರು. ಅಶೋಕ ಮಣ್ಣಿಕೇರಿ ಮನೆಗೆ ತೆರಳಿ ಮೃತ ದೇಹದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Read All News