ಬೆಳಗಾವಿ :
ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸರಕಾರ ಚಳಿಗಾಲದ ಅಧಿವೇಶನ ನಡೆಸುತ್ತಿದ್ದರೂ ವಿರೋಧ ಪಕ್ಷದವರು ಸರಕಾರಕ್ಕೆ ಸಹಕಾರ ನೀಡದೆ ಅಧಿವೇಶನದ ಗಾಂಭೀರ್ಯತೆ ಹಾಳು ಮಾಡುತ್ತಿದ್ದಾರೆ ಎನ್ನುವ ಭಾಸ ಉತ್ತರ ಕರ್ನಾಟಕ ಜನರಲ್ಲಿ ಕಾಡುತ್ತಿದೆ.
ಸದನದಲ್ಲಿ ವಿರೋಧ ಪಕ್ಷಗಳು ಸರಕಾರಕ್ಕೆ ಸೂಕ್ತ ಸಲಹೆ ನೀಡುತ್ತಿಲ್ಲ. ವೈಯಕ್ತಿಕ ರಾಜಕೀಯದಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಸರಕಾರದ ಸಚಿವರು ಆರೋಪಿಸುತ್ತಿದ್ದಾರೆ.
ಆಲಮಟ್ಟಿ ಜಲಾಶಯದ ನೀರು ಬಳಕೆಯಲ್ಲಿ ಇಂದಿಗೂ ಉತ್ತರ ಕರ್ನಾಟಕಕ್ಕೆ ಸಮರ್ಪಕ ನ್ಯಾಯ ಸಿಕ್ಕಿಲ್ಲ. 2010ರ ಡಿಸೆಂಬರ್ನಲ್ಲಿ ನ್ಯಾ. ಬ್ರಿಜೇಶ ಕುಮಾರ ಆಯೋಗ ಆಲಮಟ್ಟಿ ಜಲಾಶಯವನ್ನು 519 ಮೀಟರ್ನಿಂದ 524 ಮೀಟರ್ಗೆ ಹೆಚ್ಚಿಸಿ ನೀರು ಸಂಗ್ರಹಕ್ಕೆ ಕೆಲ ನಿಯಮಗಳೊಂದಿಗೆ ಅನುಮತಿ ನೀಡಿತ್ತು. ಇದರಿಂದ ಸುಮಾರು ಒಂದು ಲಕ್ಷ ಎಕರೆ ಪ್ರದೇಶ ಮುಳುಗಡೆ ಹಾಗೂ 22 ಗ್ರಾಮಗಳ ಸ್ಥಳಾಂತರ ಮಾಡಬೇಕಾಗಿದೆ. ಆದರೆ ಪ್ರತಿ ವರ್ಷ ನೀರು ಸಂಕಷ್ಟ ಸ್ಥಿತಿಯಲ್ಲಿ ಹೆಚ್ಚುವರಿ ನೀರು ಪಡೆಯುವ ವಿಚಾರದಲ್ಲಿ ಸರಕಾರ ಒಂದು ಹೆಜ್ಜೆ ಸಹ ಮುಂದೆ ಹೋಗಿಲ್ಲ.
ಆದರೆ ಚಳಿಗಾಲದ ಅಧಿವೇಶನದ ಐದು ದಿನದಲ್ಲಿ ಆಗೊಮ್ಮೆ, ಈಗೊಮ್ಮೆ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಧ್ವನಿ ಕೇಳಿದರೂ ಅದು ಸುಧೀರ್ಘವಾಗಿ ಚರ್ಚೆಯಾಗದೆ ಇರುವುದು ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಭೀರ ಪ್ರಯತ್ನ ನಡೆಯಲಿಲ್ಲ:
ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಶಕ್ತಿ ಕೇಂದ್ರವನ್ನಾಗಿ ಮಾಡುವ ಯಾವುದೇ ಗಂಭೀರ ಪ್ರಯತ್ನ ನಡೆಯಲೇ ಇಲ್ಲ ಎಂಬ ಆರೋಪ ಒಂದೆಡೆಯಾದರೆ, ಸರಕಾರದ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ಖಂಡಿಸಿ ಪ್ರತಿಭಟನೆಗಳು ನಡೆದರೂ ಅವುಗಳು ಸಹ ಗಂಭೀರ ಸ್ವರೂಪದ್ದಾಗಿರಲಿಲ್ಲ.ಹಾಗಾಗಿ ಪ್ರತಿಭಟನೆ ನಡೆದಾಗ ಹೋರಾಟಗಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾತ್ರ ಸರಕಾರದಿಂದ ನಡೆದಿದೆ, ನಡೆಯುತ್ತಿದೆ.