ಬೆಳಗಾವಿ : ಚನ್ನಮ್ಮನ ಕಿತ್ತೂರ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿಯವರನ್ನು ನಿನ್ನೆ ರಾತ್ರಿ ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಬೆಳಗಾವಿ ಜಿಲ್ಲೆ ಬಿಜೆಪಿ ಘಟಕವು ತೀವ್ರ ಪ್ರತಿಭಟನೆ ನಡೆಸಿತು. ಅಪಹರಣಕ್ಕೊಳಗಾದ ಪ.ಪಂ ಸದಸ್ಯನನ್ನು ತಕ್ಷಣ ಪತ್ತೆಹಚ್ಚಿ, ಸುರಕ್ಷಿತವಾಗಿ ಅವರ ಕುಟುಂಬಕ್ಕೆ ಒಪ್ಪಿಸಲು ಆಗ್ರಹಿಸಿ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿದರು.
ಬೆಳಗಾವಿ ಎಸ್.ಪಿ ಯವರ ಕಛೇರಿಗೆ ತೆರಳಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಹಾಗೂ ಪ.ಪಂ ಸದಸ್ಯ ನಾಗರಾಜ ಅಸುಂಡಿಯವರನ್ನು ಶೀಘ್ರ ಪತ್ತೆ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ನಾಗರಾಜ ಅಸುಂಡಿಯವರ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಘಟಕವು ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಈ ಪ್ರಕರಣದಲ್ಲಿ ತಕ್ಷಣ ಕ್ರಮಕೈಗೊಂಡು ನ್ಯಾಯ ಒದಗಿಸಬೇಕು ಎಂಬ ಒತ್ತಾಯ ವ್ಯಕ್ತವಾಯಿತು.