ಬೆಂಗಳೂರು: ರಾಷ್ಟ್ರದಲ್ಲಿ ಈಗ ನಡೆಯುತ್ತಿರುವುದು ಸಾರ್ವತ್ರಿಕ ಚುನಾವಣೆ ಎಂಬ ಮೂಲಭೂತ ಸಂಗತಿಯನ್ನೇ ಕಾಂಗ್ರೆಸ್ ಪಕ್ಷ ಮರೆತಿರುವಂತಿದೆ ಎಂದು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ತಮ್ಮ ಸಾಂಪ್ರದಾಯಿಕ ಎದುರಾಳಿಯನ್ನು ಜರಿದರು. ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು ರಾಜಕಾರಣದಲ್ಲಿ ರಾಹುಲ್ ಗಾಂಧಿ ಒಬ್ಬ ವಿಫಲ ನಾಯಕ, ಖುದ್ದು ಕಾಂಗ್ರೆಸ್ ನಾಯಕರೇ ಅವರ ಹೆಸರಲ್ಲಿ ಮತ ಯಾಚಿಸಲು ಹಿಂಜರಿಯುತ್ತಿದ್ದಾರೆಂದರೆ ಅವರ ನಾಯಕತ್ವ ಹೇಗಿದೆ ಅಂತ ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ಮತ್ತು ಸಮರ್ಥ ನಾಯಕತ್ವ ಕೊರತೆ ಇದೆ ಮತ್ತು ಹೇಳಿಕೊಳ್ಳಲು ಯೋಗ್ಯ ಸಾಧನೆಗಳಿಲ್ಲ; ಹಾಗಾಗಿ, ಕೇಂದ್ರದಿಂದ ಅನುದಾನ ಸಿಕ್ಕಿಲ್ಲ ಎನ್ನುತ್ತಾ ವಿವಾದ ಸೃಷ್ಟಿಸಿ ಜನರ ಬೆಂಬಲ ಗಿಟ್ಟಿಸುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಆಧಾರವಾಗಿಟ್ಟುಕೊಂಡು ಜನರ ಬಳಿ ಹೊಗುತ್ತಿದೆ ಎಂದು ಹೇಳಿದರು.