ಬೆಳಗಾವಿ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆಗೆ ಪ್ರತಿಯೊಂದು ಕಡೆಗೆ ಅವಾಂತರ ಸೃಷ್ಟಿಯಾಗಿದ್ದು, ಖಾಸಬಾಗದ ರಾಘವೇಂದ್ರ ಕಾಲೋನಿಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯ ಹೊರಗೂ, ಒಳಗೂ ಮೊಣಕಾಲುದ್ದ ನೀರು ಸಂಗ್ರಹವಾಗಿರುವದರಿಂದ ನೀರು ಹೊರ ಹಾಕಲು ಆಗದೇ ರಾತ್ರೋ ರಾತ್ರಿ ಇಲ್ಲಿನ ಕುಟುಂಬಗಳು ಮನೆ ಖಾಲಿ ಮಾಡಿವೆ.
20ಕ್ಕೂ ಹೆಚ್ಚು ಕುಟುಂಬಗಳು ಸಂಬಂಧಿಕರ ಮನೆಗೆ ಹೋಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲ, ಹಳೆಯ ಡ್ರೈನೇಜ್ ಪೈಪ್ ಲೈನ್ ನಿಂದ ಸಮಸ್ಯೆ ಉದ್ಭವವಾಗಿದ್ದು, ಕುಡಿಯುವ ನೀರಿನ ಜೊತೆಗೆ ಮಿಶ್ರಣ ಆಗುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.