ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕ: ಶ್ರೀಕಾಂತ ಪತ್ತಾರ

  • 15 Jan 2024 , 12:08 AM
  • Belagavi
  • 411

ಬೆಳಗಾವಿ : ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಭಾರತೀಯ ಕಲೆ‌, ಸಂಸ್ಕೃತಿ, ತಂತ್ರಜ್ಞಾನದ  ಪ್ರತೀಕವಾಗಿದ್ದಾರೆ ಎಂದು ಹಾರೂಗೇರಿಯ ನಿವೃತ್ತ ಪ್ರಾಚಾರ್ಯರಾದ ಶ್ರೀಕಾಂತ ಪತ್ತಾರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ. ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ವಿಶ್ವಕರ್ಮರು ಅಪಾರ ಜ್ಞಾನದಿಂದ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ವಿಶ್ವಕರ್ಮ ಜಯಂತಿಯಂದು ಉಪಕರಣಗಳನ್ನು, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲ್ಪಡುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.

ಪ್ರಸ್ತುತ ಯುಗದಲ್ಲಿ ನಮ್ಮ ಸಮುದಾಯದವರು ಕೇವಲ ಜೀವನೋಪಾಯಕ್ಕೆ ಮಾತ್ರ ತಮ್ಮ ಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ. ಇದು ಬದಲಾಗಬೇಕು ನಮ್ಮ ಪೂರ್ವಿಕರು ಮಾಡಿದ ಸಾಧನೆಯನ್ನು ನೆನೆದು ಆಧುನಿಕ ಯುಗದಲ್ಲಿ ಕಲಾಕ್ಷೇತ್ರದಲ್ಲಿ ಸಾಧನೆಯತ್ತ ಸಾಗಬೇಕು. ಮೂಲಕಸಬುಗಳ ತರಬೇತಿಗಳನ್ನು ನೀಡಿ ಸಮಾಜಕ್ಕೆ ಇನ್ನು ಹೆಚ್ಚಿನ ರೀತಿಯಲ್ಲಿ ಕೊಡುಗೆಯನ್ನು ನೀಡಲು ನಮ್ಮ ಪೀಳಿಗೆಗಳನ್ನು ಸಿದ್ಧಪಡಿಸಬೇಕು ಎಂದರು.

ಕರಕುಶಲತೆಯ ಬೆಳವಣಿಗೆಯ ಜೊತೆಗೆ ನಮ್ಮ ಜ್ಞಾನದ ಬೆಳವಣಿಗೆಯಾಗಬೇಕು. ವಿಶ್ವಕರ್ಮರ ಜಯಂತಿಯ ಮೂಲ ಉದ್ದೇಶ ಜ್ಞಾನವೃದ್ಧಿ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳವಣಿಗೆ ಹೊಂದಬೇಕು ಎಂದು ನಿವೃತ್ತ ಪ್ರಾಚಾರ್ಯರಾದ ಶ್ರೀಕಾಂತ ಪತ್ತಾರ ಅವರು ಹೇಳಿದರು.

ಶ್ರೀ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ :

ಇದಕ್ಕೂ ಮುಂಚೆ ನಗರದ ಕೋಟೆಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರಗೆ ವಾದ್ಯಮೇಳ,  ಕಲಾ ತಂಡಗಳು ಹಾಗೂ ಬೈಕ್ ರ್ಯಾಲಿಯೊಂದಿಗೆ ಶ್ರೀ ವಿಶ್ವಕರ್ಮರ  ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅನೀಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. 

ಶ್ರೀ ಕಾಳಿಕಾದೇವಿ ಭಜನಾ ಮಂಡಳ ಹಾಗೂ ನೈನಾ ಗಿರಿಗೌಡರ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಸ್ವಾಗತಿಸಿದರು.

ಡಾ.ಪ್ರತಾಪ್ ಕುಮಾರ ಅವರು ಕಾರ್ಯಕ್ರಮ ನಿರೂಪಿಸಿದರು. ಹಾರೂಗೇರಿ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣ ಸಂಘದ ಅಧ್ಯಕ್ಷರಾದ ಕಲ್ಲಪ್ಪ  ಬಡಿಗೇರ ವಂದಿಸಿದರು.

ಸಂತೋಷ ಪತ್ತಾರ, ಬೆಂಗಳೂರು ಲಲೀತ ಕಲಾ ಅಕಾಡೆಮಿಯ ಈರಣ್ಣ ಅರ್ಕಸಾಲಿ, ಸಮಾಜದ ಮುಖಂಡರಾದ ಭರತೇಶ ಶಿರೋಳ್ಕರ, ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ರಾಘವೇದ್ರ ಪತ್ತಾರ , ಮಲ್ಲಗೌಡ ಪಾಟೀಲ ಹಾಗೂ ವಿಶ್ವಕರ್ಮ ಸಮುದಾಯದ ಅನೇಕ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Read All News