ಬೆಳಗಾವಿ : ಕರ್ನಾಟಕದ ಗಡಿಭಾಗ ಬೆಳಗಾವಿಯಲ್ಲಿ ಕನ್ನಡ ಉಳಿಯಲು ಪ್ರಮುಖ ಕಾರಣ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಶನಿವಾರ ನಗರದ ಲಿಂಗರಾಜ ಕಾಲೇಜಿನ ಆವರಣದಲ್ಲಿ ಕೆಎಲ್ಇ ಕನ್ನಡದ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಜನಪದ ಸಂಭ್ರಮ ಮತ್ತು ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಿಂಗರಾಜ ಕಾಲೇಜಿನಲ್ಲಿ ಹುಟ್ಟಿದ ಪ್ರತಿಯೊಂದ ಕಲ್ಲು ಕನ್ನಡದ ಸಲುವಾಗಿ ಮಾತನಾಡುತ್ತಿದೆ ಅದು ಬಹಳ ಮುಖ್ಯ. ನಾನು ಜಿ.ಎ. ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ ನನ್ನ ಕಣ್ಣು ಮುಂದೆಯೇ ನೋಡಿದ್ದೇನೆ. ಪುಂಡಾಟಿಕೆಯ ಮರಾಠಿ ಜನ ಸಿಕ್ಕ, ಸಿಕ್ಕವರನ್ನು ಹೊಡೆದಿದ್ದನ್ನು ನೋಡಿದ್ದೇನೆ. ಆದರೆ ನಮ್ಮ ವಿದ್ಯಾರ್ಥಿಗಳು ಬೆಳಗಾವಿ ನಮ್ಮದೆ. ಇದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೋರಾಟ ಮಾಡಿದ್ದು ಲಿಂಗರಾಜ ಕಾಲೇಜು ಎಂದರು.
ಮುಂಬೈ ಪ್ರಾಂತದ ಶಿಕ್ಷಣ ಮಂತ್ರಿಯಾಗಿದ್ದ ಸರ್ ಸಿದ್ಧಪ್ಪ ಕಂಬಳಿ ಅವರು ಬಾಂಬೆ ವಿವಿಯಲ್ಲಿ ಲಿಂಗರಾಜ ಕಾಲೇಜಿ ಗೆ ಅನುಮತಿ ನೀಡದಿದ್ದರೇ ಇವತ್ತು ಈ ಕಾಲೇಜು ನೋಡಲು ಸಾಧ್ಯವಿಲ್ಲವಾಗಿತ್ತು.
ಆ ಕಾಲದಲ್ಲಿ ಹೋರಾಟ ಮಾಡಿ ಕಾಲೇಜಿನ ಅನುಮತಿ ಪಡೆದಿದ್ದೇವೆ. ಅಲ್ಲಿಂದ ಇಲ್ಲಿಯವರೆಗೆ ಲಿಂಗರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು ಎಷ್ಟೋ ಜನ ವಿದ್ಯಾರ್ಥಿಗಳು ಪಾಸಾಗಿದ್ದಾರೆ ವಿಜ್ಞಾನಿ, ರಾಜಕೀಯ ಮುಖಂಡರಾಗಿ ಪಾಸ್ ಆಗಿದ್ದಾರೆ. ದಿ. ಶಿರಸಂಗಿ ಲಿಂಗರಾಜ ಹೆಸರಿನಲ್ಲಿ ಸ್ಥಾಪನೆ ಮಾಡಿದ್ದು ಶ್ಲಾಘನೀಯ ಎಂದರು.
ಬೆಳಗಾವಿಯಲ್ಲಿ ಶಿಕ್ಷಣದ, ಕನ್ನಡದ ಕಹಳೆಯ ಕೊಡುಗೆ ಅಪಾರವಾಗಿದೆ. ಲಿಂಗರಾಜ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಕನ್ನಡದ ಹಬ್ಬ, ಜಾನಪದ ಉತ್ಸವದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿಯಲ್ಲಿದ್ದ ಕನ್ನಡದ ಮನಸ್ಸುಗಳು ಕರ್ನಾಟಕದಲ್ಲಿ ಇಲ್ಲ. ಹೀಗೆ ಕನ್ನಡದ ಭಾಷೆಯ ಬೆಳವಣಿಗೆಗಾಗಿ, ಕನ್ನಡದ ಅಳಿವು, ಉಳಿವಿಗಾಗಿ ಕನ್ನಡದ ನೆಲ, ಜಲ, ಭಾಷೆಯ ಸಂವೃದ್ಧಿಗಾಗಿ ಕೊಡುಗೆ ನೀಡಿರುವ ಕೆಎಲ್ಇ ಸಂಸ್ಥೆ, ಲಿಂಗರಾಜ ಕಾಲೇಜಿನ ಆವರಣದಲ್ಲಿ ಕನ್ನಡದ ಹಬ್ಬ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ವಿಜ್ಞಾನ ಎಷ್ಟೆ ಮುಂದುವರೆದಿದ್ದರೂ ಜನ್ಮ ಕೊಟ್ಟ ತಂದೆ, ತಾಯಿ, ಭೂಮಿಯನ್ನು ಮಾತೃ ಭಾಷೆಯನ್ನು ಪ್ರೀತಿಸುವ ನಮ್ಮ ಮನಸ್ಸುಗಳು ಒಂದಾಗಬೇಕು. ನಾವು ಸಮಾಜದಲ್ಲಿ ಎಷ್ಟೋ ದೊಡ್ಡ ಸ್ಥಾನಕ್ಕೆ ಹೋಗಬಹುದು. ಆದರೆ ಮಾತೃಭಾಷೆಯನ್ನು ಪ್ರೀತಿಸಬೇಕು. ಅದು ತಾಯಿ ಭಾಷೆ. ಕನ್ನಡ ಭಾಷೆಯನ್ನು ಪ್ರೀತಿಸೋಣ. ದೇಶಿಯ ಕಲೆ, ಸಂಸ್ಕೃಯನ್ನು ಬೆಳೆಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ, ತೋಡುಗೆಗಳನ್ನು ತೊಟ್ಟು ಕನ್ನಡದ ಭಾವುಟವನ್ನು ಹಾರಾಡಿಸಿ ಸಂತಸ ಪಟ್ಟರು.
ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ವಿಭಾಗದ ಅಧ್ಯಕ್ಷ ಪ್ರೊ. ಎಸ್.ಎಂ.ಗಂಗಾಧರಯ್ಯ, ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಎಚ್,ಎಸ್. ಮೇಲಿನಮನಿ, ಪ್ರೊ. ವಿಭಾ ಹೆಗಡೆ, ಡಾ. ರೇಣುಕಾ ಕಠಾರಿ, ಡಾ. ಎಚ್. ಎಂ. ಚನ್ನಪ್ಪಗೋಳ ಉಪಸ್ಥಿತರಿದ್ದರು.