ಬೈಲಹೊಂಗಲ: ‘ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಅವರ ಅಬ್ಬರದ ಚುನಾವಣಾ ಪ್ರಚಾರ ನೋಡಿದರೆ ಇತಿಹಾಸ ಮರಳಿ ಸೃಷ್ಠಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಎಲ್ಲಾ ರೈತ ಸಂಘಟನೆ, ಇನ್ನೂಳಿದ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಒಟ್ಟುಗೂಡಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣೆಯಲ್ಲಿ ಆರಿಸಿ ತರಬೇಕೆಂಬ ತಿರ್ಮಾಣಕ್ಕೆ ಬಂದಿರುವುದಾಗಿ’ ಕರ್ನಾಟಕ ರಾಜ್ಯ ರೈತ ಸಂಘ, ಕೂಲಿ ಕಾರ್ಮಿಕರ ಸಂಘ, ನೇಗಿಲ ಒಡೆಯ ರೈತ ಸಂಘ, ಸ್ವಾಭಿಮಾನ ರೈತ ಸಂಘ, ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು, ಪದಾಧಿಕಾರಿಗಳು ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಮಂಗಳವಾರ ಹೂವಿನ ಮಾಲೆ ಅರ್ಪಿಸಿ ಮಾತನಾಡಿ, ‘ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಅವರನ್ನು ಬೆಂಬಲಿಸಿ ಮೇ.4ರಂದು ಮುಂಜಾನೆ 9ಕ್ಕೆ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸಭೆ ಸೇರಿ ಚಕ್ಕಡಿ ಸಹಿತ ಬೃಹತ್ ಚುನಾವಣಾ ರ್ಯಾಲಿ ನಡೆಸುವ ಮೂಲಕ ಈ ನಾಡಿನ ರೈತರ ಶಕ್ತಿ ಪ್ರದರ್ಶನ ಮಾಡಲಾಗುವುದು. ರೈತಪರ ಎಲ್ಲ ರಾಜ್ಯ ಸಂಘಟನೆಗಳು ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಲು ಅಧಿಕೃತವಾಗಿ ಸೂಚನೆ ನೀಡಿವೆ. ರೈತರು ತಮ್ಮ, ತಮ್ಮ ಚಕ್ಕಡಿ, ಟ್ರ್ಯಾಕ್ಟರಗಳನ್ನು ತಂದು ಸಂಪೂರ್ಣ ಬೆಂಬಲ ಸೂಚಿಸಬೇಕು’ ಎಂದರು.
‘ಬೈಲಹೊಂಗಲ ಶೇ.80 ರಷ್ಟು ಕೃಷಿ ಭೂಮಿ ಹೊಂದಿದೆ. ರೈತರ ಸಾಕಷ್ಟು ಸಮಸ್ಯೆಗಳು ಇವೆ. ನೀರಾವರಿ, ಅನೇಕ ಕುಂದು ಕೊರತೆಗಳಿವೆ. ಅವುಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ,್ತ ಶ್ರಮಿಕನ ಸಮಸ್ಯೆ ಎಂದರೆ ಅದು ನನ್ನ ಸಮಸ್ಯೆ ಎಂದು ಭಾವಿಸಿ ಪರಿಹಾರ ಹುಡುಕಿಕೊಡುವ ಡಾ.ವಿಶ್ವನಾಥ ಪಾಟೀಲ ಅವರನ್ನು ಆರಿಸಿ ತರಬೇಕೆನ್ನುವ ಸಾರ್ವಜನಿಕರ ಬೃಹತ್ ನಿರ್ಣಯ ಮಾಡಲಾಗುವುದು’ ಎಂದರು.
‘ ಯಾರೂ ಹಣ, ಹೆಂಡಕ್ಕೆ ಮತ ಹಾಕದೆ ರೈತರ, ನಾಡಿನ ಹಿತ ಚಿಂತನೆ ಬಯಸುವ ವ್ಯಕ್ತಿಗೆ ಮತ ನೀಡಬೇಕು. ಕಾಂಗ್ರೆಸ್, ಬಿಜೆಪಿ ಅನೇಕ ಆಸೆ, ಆಮಿಷಗಳನ್ನು ನೀಡುತ್ತಿವೆ. ಆದರೆ ಯಾವು ಕಾರ್ಯ ರೂಪಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರ ದೊಡ್ಡ, ದೊಡ್ಡ ಉದ್ಯೆಮಿಗಳ 10 ಲಕ್ಷ ಸಾವಿರ ಕೋಟಿ ಹಣ ಸಾಲ ಮನ್ನಾ ಮಾಡಿದೆ. ಆದರೆ ರೈತರ 2 ಸಾವಿರ ಕೋಟಿ ಹಣ ಸಾಲ ಮನ್ನಾ ಮಾಡುತ್ತಿಲ್ಲ. ರೈತ ಸಂಪೂರ್ಣ ನಾಶ ಆಗುವ ಸ್ಥಿತಿಗೆ ಬಂದು ತಲುಪ್ಪಿದ್ದಾನೆ. ಇದು ಹೀಗೆ ಮುಂದುವರೆದಿದ್ದೇ ಆದರೆ ಬೈಲಹೊಂಗಲ ನಾಡಿನ ರೈತರ ಪರಿಸ್ಥಿತಿ ಹಾಗೆ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಸಂಪೂರ್ಣ ರೈತ ಸಂಘಟನೆಗಳು ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು’ ಎಂದು ಮನವಿ ಮಾಡಿದರು.
ಕೊರವಿನಕೊಪ್ಪ, ಏಣಗಿ, ವಕ್ಕುಂದ, ಮೂಗಬಸವ, ಚಿಕ್ಕೊಪ್ಪ, ನಯಾನಗರ ಗ್ರಾಮಸ್ಥರು ಇದ್ದರು.