ಬೆಳಗಾವಿ: ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ SC/ST ಕುಂದು ಕೊರತೆಗಳ ಸಭೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಆಗುತ್ತಿರುವ ಸಮಸ್ಯೆಗಳು ಅನ್ಯಾಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ಸಂಘದ ವತಿಯಿಂದ ವಿಸ್ತರಿಸಿದ್ದಾರೆ ಮತ್ತು ರಾಜ್ಯದಲ್ಲಿ ಬಹುಸಂಖ್ಯಾತರು ಹಾಗೂ ಎಲ್ಲ ರಂಗಗಳಲ್ಲಿ ಹಿಂದುಳಿದ, ಶಿಕ್ಷಣದಲ್ಲಿ ವಂಚಿತರಾದ ಪ.ಪಂಗಡದ ನಾಯಕ ಜನಾಂಗಕ್ಕಾಗುತ್ತಿರುವ ಅನ್ಯಾಯ ಹಾಗೂ ಅನೇಕ ಸಹಾಯ ಸವಲತ್ತುಗಳಿಂದ ವಂಚಿತರಾಗುತ್ತಿರುವದು ವಿಷಾದನೀಯ ಎಂದು ಹೇಳಿದ್ದಾರೆ.
ಈ ದಿಸೆಯಲ್ಲಿ ಈ ಜನಾಂಗದ ಹೀನಾಯ ಪರಿಸ್ಥಿತಿ ಕುರಿತು ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಈ ಮನವಿ ಮಾಡಿ ವಾಲ್ಮೀಕಿ ನಾಯಕ ಸಮಾಜದ ಶಕ್ತಿಯ ಬಗ್ಗೆ ತಿಳಿಸಲಾಯಿತು ಮತ್ತು ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
1)ಅನುದಾನಿತ , ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಬಹಳ ವರ್ಷಗಳಿಂದ ಪ.ಪಂಗಡದ (ಎಸ್. ಟಿ) ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ನಿರುದ್ಯೋಗ ಸಮಸ್ಯೆ ಹೆಚ್ಚು ಮಾಡಲಾಗಿದೆ.ಈ ನಿಟ್ಟಿನಲ್ಲಿ ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು.
2)ಈಗಾಗಲೇ ಸೇವೆ ಸಲ್ಲಿಸುತ್ತಿರುವವರಿಗೆ ಬಡತಿ ನೀಡುವಲ್ಲಿ ಅನ್ಯಾಯವಾಗುತ್ತಿದೆ.
3)ಪ.ಪಂಗಡದ ಸಿಬ್ಬಂದಿಗೆ ಎಲ್ಲ ಇಲಾಖೆ, ಕಾಲೇಜು, ವಿಶ್ವವಿದ್ಯಾಲಯಗಳ ವಿಭಾಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಕಳವಳಕಾರಿಯಾಗಿದೆ.
4)ಬಹಳ ವರ್ಷಗಳಿಂದ ಖಾಲಿಯಿರುವ ಎಲ್ಲ ಹಿಂಬಾಕಿ (ಬ್ಯಾಕ್ ಲಾಗ್ ) ಹುದ್ದೆಗಳನ್ನು ಉಪ ಸಮಿತಿ ಮಾಡಿ ಅದರ ನಿರ್ಣಯ ಕಾಯದೆ, ಅನವಶ್ಯಕ ವಿಳಂಬ ನೀತಿ ಅನುಸರಿಸದೇ ಶೀಘ್ರ ತುಂಬಬೇಕು.
5)ಎಲ್ಲ ನೇಮಕಾತಿಗಳಲ್ಲಿ, ಶಾಲೆ, ಕಾಲೇಜು ಪ್ರವೇಶ ಪಡೆಯುವಲ್ಲಿ ೭ % ಮೀಸಲಾತಿ ಪಾಲಿಸಬೇಕು.
6)ವಿದ್ಯಾರ್ಥಿಗಳಿಗೆ ವಿಳಂಬವಿಲ್ಲದೆ ಶಿಷ್ಯವೇತನ ಸಿಗಬೇಕು.
ಈಗಿರುವ ಆದಾಯಮಿತಿಯಿಂದ ಬಹುತೇಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತಲಾಗುತ್ತಿದ್ದು ತಕ್ಷಣ ಆದಾಯ ಮಿತಿ ಹೆಚ್ಚಿಸಬೇಕು.
7) ಎಸ್ ಸಿ ಎಸ್ ಪೀ/ ಟಿ ಎಸ್ ಪೀ ಯೋಜನೆಗಳ ಹಣವನ್ನು ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡು ನಮ್ಮನ್ನು ರಸ್ತೆಗೆ ತಳ್ಳಿದೆ ನಮ್ಮ ಯೋಜನೆ ನಮ್ಮ ಹಕ್ಕು ನಮಗೆ ಸಿಗಲೇಬೇಕು ಎಂದು ಮನ್ನಿಸಲಾಯಿತು ಎಂದು ತಿಳಿಸಿದ್ದಾರೆ.
8)ಎಲ್ಲ ಸಮಾಜದ ಅಭಿವೃದ್ಧಿ ನಿಗಮಗಳಲ್ಲಿ ಅರ್ಜಿ ಕರೆದರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿ ಕರೆಯದೆ ಅನ್ಯಾಯ ಮಾಡಿದ್ದಾರೆ,ತಕ್ಷಣವೇ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
9)ಮದಕರಿ ನಾಯಕರ ಜಯಂತಿ ಸರ್ಕಾರದಿಂದ ನಡೆಸುವಂತೆ ಮನವಿ ಮಾಡಿ ಆಗ್ರಹಿಸಲಾಯಿತು.
10)ಎಸ್ ಸಿ/ಎಸ್ ಟಿ ಸಮುದಾಯಗಳಿಗೆ ಸಿಗುವ ಸೌಲಭ್ಯಗಳು ಯೋಜನೆಗಳು ಮತ್ತು ಹಕ್ಕುಗಳ ಬಗ್ಗೆ ನಮ್ಮ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು. ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಎಲ್ಲ ಹಳ್ಳಿ ಗ್ರಾಮಗಳಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಆಗಲೇಬೇಕು ಎಂದು ಕೋರಿದ್ದಾರೆ.
11)ಎಲ್ಲಾ ಪೊಲೀಸ್ ಠಾಣೆಯಲ್ಲಿ SC/ST ಕುಂದು ಕೊರತೆಗಳ ಸಭೆ ಕಡ್ಡಾಯವಾಗಿ ಆಗಲೇಬೇಕು ಎಂದು ಒತ್ತಾಯಿಸಲಾಯಿತು.
ಮತ್ತು ವಾಲ್ಮೀಕಿ ಸಮುದಾಯಕ್ಕೆ ಹಕ್ಕುಬದ್ದವಾದ ನ್ಯಾಯ ಸಿಗುವಂತೆ ಮನವಿ ಮಾಡಿ ನ್ಯಾಯ ಸಿಗದೆ ಇದ್ದಲ್ಲಿ ಮಲತಾಯಿ ಧೋರಣೆಯನ್ನು ತೋರಿದಲ್ಲಿ ಮುಂಬರುವ ದಿನದಲ್ಲಿ ಇಲಾಖೆಗಳ ಮುಂದೆ ವಾಲ್ಮೀಕಿ ನಾಯಕ ಸಮುದಾಯದಿಂದ ರಸ್ತೆಗೆ ಇಳಿದು ಉಗ್ರವಾದ ಹೋರಾಟ ಮಾಡಲು ಅವಕಾಶ ಮಾಡಿಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ.
ನಮ್ಮ ಜನ ಹೋರಾಟಕ್ಕೆ ರಸ್ತೆಗೆ ಇಳಿದರೆ ತಡೆಯುವ ಶಕ್ತಿ ಯಾವ ಸರ್ಕಾರಕ್ಕೂ ಇಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಬದಲ್ಲಿ ಮಹೇಶ ಶಿಗೀಹಳ್ಳಿ(ರಾಜ್ಯಾಧ್ಯಕ್ಷ)
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಮತ್ತು ಶಿವಾ ನಾಯಕ್ ಉಪಾಧ್ಯಕ್ಷ ಮತ್ತು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.