ಬೆಳಗಾವಿ : ರಾಜ್ಯದ ಜನರಿಂದ ಆಶೀರ್ವಾದ ಪಡೆದು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಯಾವುದೇ ಪೂರ್ವಾಪರ ಯೋಜನೆ ಇಲ್ಲದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿ ಗ್ಯಾರಂಟಿ ಯೋಜನೆಯನ್ನು ಕೊಡುವುದಾಗಿ ಹೇಳಿದರು.
ಕೇಂದ್ರ ಆಹಾರ ಭದ್ರತೆಯಿಂದ ಬಡ ರೇಖೆಯಲ್ಲಿರುವ ಜನರಿಗೆ ತಲಾ ಐದು ಕೆ.ಜಿ.ಅಕ್ಕಿ ನೀಡುತ್ತಾ ಬಂದಿದ್ದೇವೆ. ಅದೇ ದರದಲ್ಲಿ ಎಪಿಎಲ್ ಕಾಡ್೯ ಹೊಂದಿದವರಿಗೆ ಅಕ್ಕಿ ನೀಡುತ್ತಾ ಬಂದಿದೆ. ಸುಮಾರು 80 ಕೋಟಿ ಜನರಿಗೆ ಅಕ್ಕಿ ಪೂರೈಸಿದ್ದೇವೆ ಎಂದರು.
ಆದರೆ ಕಾಂಗ್ರೆಸ್ ಸರಕಾರ ಕೇಂದ್ರ ಆಹಾರ ನಿಗಮ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುವುದಾಗಿ ಹೇಳಿ ಈಗ ಕೊಡುತ್ತಿಲ್ಲ ಎಂದು ವಿತಂಡವಾದ ಹಾಕುತ್ತಿದ್ದಾರೆ. ಇದು ಶುದ್ಧ ಸುಳ್ಳು. ಗೋದಾಮಿನಲ್ಲಿ ಅಕ್ಕಿ ಇಟ್ಟುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರ ವಿನಾಕಾರಣ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿರುವುದು ಅತ್ಯಂತ ಖಂಡನೀಯ. ಅಲ್ಲದೆ, 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ಈಗ ಷರತ್ತು ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ವಿದ್ಯುತ್ ಬಿಲ್ ಹೆಚ್ವಳ ಮಾಡಿರುವುದು ಕೆಇಆರ್ ಸಿ ಅದನ್ನು ತಡೆ ಹಿಡಿಯುವ ಅಧಿಕಾರ ಕಾಂಗ್ರೆಸ್ ಸರಕಾರ ಇದೆ. ಅದನ್ನು ವಾಪಸ್ಸು ಪಡೆಯಿರಿ ಎಂದು ಸವಾಲ್ ಹಾಕಿದರು.
ರೈತರ ಆಧಾರ ಕಾಡ್೯ಗಳನ್ನು ಆರ್ ಆರ್ ನಂಬರ್ ಗೆ ಲಿಂಕ್ ಮಾಡಲು ಹೇಳುತ್ತಿದೆ ಕಾಂಗ್ರೆಸ್ ಸರಕಾರ ಇದರಲ್ಲಿಯೂ ಸರಕಾರ ರಾಜಕೀಯ ಮಾಡುತ್ತಿದೆ. ಒಂದು ವೇಳೆ ರೈತರಿಗೆ ಅನ್ಯಾಯ ಮಾಡಿದರೆ ರಾಜ್ಯದ ರೈತರ ಕೆಂಗಣ್ಣಿಗೆ ಗುರಿಯಾಗಲಿದೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲರ್ಯ ನೀಡಿರುವುದು ಸ್ವಾಗತಾರ್ಹ. ಆದರೆ ಕೆಲವೊಂದು ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮೇಲೆ ಗೂಬೆ ಕುರಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.