ಬೆಳಗಾವಿ :ತುಂಗಭದ್ರಾ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಕೊಟ್ಟು ಹಳೆಯ ಆದೇಶವನ್ನು ಪುನಃ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಸಲುವಾಗಿ ಶುಕ್ರವಾರ ರಾಯಚೂರ ಜಿಲ್ಲೆಯ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿರುವ ಬಸ್ತವಾಡದ ಬಳಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಕಾರ್ಮಿಕರ ಮೇಲೆ ಹಾಕಿದ ಪೊಲೀಸ್ ಪ್ರಕರಣವನ್ನು ಹಿಂಪಡೆಯಬೇಕು. ಕಳೆದ 2018 ಹಾಗೂ 2019ರಲ್ಲಿ ಬಾಕಿ ಇರುವ 14 ತಿಂಗಳ ಸಂಬಳವನ್ನು ಕಾರ್ಮಿಕರಿಗೆ ಪಾವತಿಸಲು ನಿಗಮಕ್ಕೆ ಸೂಚಿಸಬೇಕೆಂದು ಒತ್ತಾಯಿಸಿದರು.
ಶಾಸನಬದ್ಧ ಸೌಲಭ್ಯಗಳಾದ ವೇತನ ಪಾವತಿ ಮಾಡುವಂತೆ ಆದೇಶ ಮಾಡಬೇಕು. ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ತುಂಗಭದ್ರಾ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿದರು.
ಜಿ.ಅಡವಿರಾವ್, ಮಲ್ಲಿಕಾರ್ಜುನ ಮರತಮ್ಮನವರ, ಆರ್. ಮಾನಸಯ್ಯ, ಬಸವರಾಜ ಗೌಡಪ್ಪ, ರಮೇಶ ಕೊಡ್ನೇಕರ, ಅಮರಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.