ದೇವ ಶಿಲ್ಪಿ ವಿಶ್ವಕರ್ಮ ದೇವರನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯಂದು ಪೂಜಿಸಲಾಗುತ್ತದೆ. ಪ್ರಾಸಂಗಿಕವಾಗಿ, ಈ ವರ್ಷ ವಿಶ್ವಕರ್ಮ ಜಯಂತಿಯು ಕನ್ಯಾ ಸಂಕ್ರಾಂತಿಯ ದಿನವಾದ ನಾಳೆ ಸೆಪ್ಟೆಂಬರ್ 17 ರಂದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ವಿಶ್ವಕರ್ಮ ಪೂಜೆಯೊಂದಿಗೆ ಸೂರ್ಯದೇವನನ್ನು ಪೂಜಿಸುವುದರಿಂದ ಬಹಳ ಶುಭ ಫಲ ಸಿಗುತ್ತದೆ. ಏಕೆಂದರೆ ಸೂರ್ಯದೇವನನ್ನು ವಿಶ್ವಕರ್ಮನ ಅಳಿಯನೆಂದು ಪರಿಗಣಿಸಲಾಗುತ್ತದೆ ಮತ್ತು ವಿಶ್ವಕರ್ಮನು ಸೂರ್ಯದೇವನ ಕಿರಣಗಳಿಗೆ ರೂಪವನ್ನು ನೀಡಿದ್ದಾನೆ ಎನ್ನಲಾಗುತ್ತದೆ.
ಭಗವಾನ್ ವಿಶ್ವಕರ್ಮನ ಪೂಜೆಗೆ ಶುಭ ಮುಹೂರ್ತ: - ಸೆಪ್ಟೆಂಬರ್ 17 ರ ಶನಿವಾರದಂದು ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ.
- ಶುಭ ರೋಹಿಣಿ ನಕ್ಷತ್ರವು ಮಧ್ಯಾಹ್ನ 12.21 ರವರೆಗೆ ಇರುತ್ತದೆ.
- ಸಂಕ್ರಾಂತಿಯ ಪುಣ್ಯಕಾಲ ಮಧ್ಯಾಹ್ನ 1.46ರವರೆಗೆ ಇರುತ್ತದೆ.
- ಸೆಪ್ಟೆಂಬರ್ 17 ರಂದು ಬೆಳಿಗ್ಗೆ 9 ರಿಂದ ರಾತ್ರಿ 10:30 ರವರೆಗೆ ರಾಹುಕಾಲ ನಡೆಯುತ್ತದೆ.
- ಬೆಳಿಗ್ಗೆ 7.38 ರಿಂದ 9.11 ರವರೆಗೆ ವಿಶ್ವಕರ್ಮ ಪೂಜೆ ಶುಭ ಮುಹೂರ್ತ ಇರುತ್ತದೆ.
- ಮಧ್ಯಾಹ್ನ 12:15 ರಿಂದ 1:47 ರವರೆಗೂ ವಿಶ್ವಕರ್ಮ ಪೂಜೆಯನ್ನು ಮಾಡಬಹುದು.
- ಲಾಭ ಮುಹೂರ್ತ ಮಧ್ಯಾಹ್ನ 1:47 ರಿಂದ 3:20 ರವರೆಗೆ ಇರುವುದು.
- ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ವಿಶ್ವಕರ್ಮ ಪೂಜೆಯನ್ನು ಬೆಳಗ್ಗೆ 7:38 ರಿಂದ 9:00 ಗಂಟೆಯವರೆಗೆ ಮಾಡಬೇಕು.
ವಾಹನ ವ್ಯಾಪಾರ ಮಾಡುವವರು ಮಧ್ಯಾಹ್ನ 12:15 ರಿಂದ 1.46 ರವರೆಗೆ ವಿಶ್ವಕರ್ಮ ಪೂಜೆ ಮಾಡಬೇಕು. ಕಾರ್ಖಾನೆಯಲ್ಲಿ ವಿಶ್ವಕರ್ಮ ಪೂಜೆಯನ್ನು ಮಾಡುವುದಾದರೆ ಮಧ್ಯಾಹ್ನ 12:00 ರಿಂದ 1.46 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ.
ವಿಶ್ವಕರ್ಮ ಪೂಜೆ ವಿಧಾನ ಮತ್ತು ಮಂತ್ರ: ದೇವರುಗಳ ಆಯುಧಗಳು, ಅರಮನೆಗಳು ಮತ್ತು ಆಭರಣಗಳು ಇತ್ಯಾದಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ಮಾಡಲು ವಿಶ್ವಕರ್ಮನು ಕೆಲಸ ಮಾಡುತ್ತಾನೆ ಎಂದು ಹೇಳಲಾಗಿದೆ. ಕಾರ್ಖಾನೆಗಳು, ಕಚೇರಿಗಳು ಮತ್ತು ಕೈಗಾರಿಕೆಗಳಲ್ಲಿ ತೊಡಗಿರುವ ಯಂತ್ರಗಳನ್ನು ವಿಶ್ವಕರ್ಮ ದೇವರ ಆರಾಧನೆಯ ದಿನದಂದು ಪೂಜಿಸಲಾಗುತ್ತದೆ. ಮೊದಲಿಗೆ ಅಕ್ಷತೆ ಎಂದರೆ ಅಕ್ಕಿ, ಹೂವು, ಸಿಹಿತಿಂಡಿ, ಹಣ್ಣು, ಕುಂಕುಮ, ವೀಳ್ಯದೆಲೆ, ಧೂಪ, ದೀಪ, ರಕ್ಷಾಸೂತ್ರ, ಮೊಸರು ಮತ್ತು ವಿಶ್ವಕರ್ಮ ದೇವರ ಚಿತ್ರವನ್ನು ಜೋಡಿಸಿ. ಪೂಜೆ ಮಾಡುವ ಪೀಠದ ಮೇಲೆ ಅಕ್ಕಿ ಹಿಟ್ಟಿನಿಂದ ಅಷ್ಟದಳ ರಂಗೋಲಿಯನ್ನು ಮಾಡಿ. ಅದರ ಮೇಲೆ 7 ಬಗೆಯ ಧಾನ್ಯಗಳನ್ನು ಇರಿಸಿ. ನಂತರ ಅದರ ಮೇಲೆ ಭಗವಾನ್ ವಿಶ್ವಕರ್ಮರ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸಿ. ಕೈಯಲ್ಲಿ ಅಕ್ಷತೆಯನ್ನು ಹಿಡಿದು ಈ ರೀತಿ ಹೇಳಿ.
'' *ಓಂ ಭಗವಾನ್ ವಿಶ್ವಕರ್ಮ ದೇವ ಶಿಲ್ಪಿ ಇಹಗಚ್ಛ ಇಹ ಸುಪ್ರತಿಷ್ಟೋ ಭವ*''
ಈ ಮಂತ್ರವನ್ನು ಪಠಿಸಿದ ನಂತರ ವಿಶ್ವಕರ್ಮರ ವಿಗ್ರಹ ಅಥವಾ ಚಿತ್ರ, ಏನೇ ಇದ್ದರೂ ಅದನ್ನು ಅಕ್ಕಿಯ ರಾಶಿ ಮೇಲೆ ಇರಿಸಿ. ನಂತರ ವಿಶ್ವಕರ್ಮನು ನಿಮ್ಮ ಮುಂದೆ ಇದ್ದಾನೆ ಎಂಬ ನಂಬಿಕೆಯನ್ನು ಮನಸ್ಸಿನಲ್ಲಿ ಜಾಗೃತಗೊಳಿಸಿ, ಅವರಿಗೆ ನಮಸ್ಕರಿಸಿ ನಂತರ ಪೂಜೆಯನ್ನು ಆರಂಭಿಸಿ.
ಉಪಕರಣಗಳ ಮೇಲೆ ತಿಲಕ ಮತ್ತು ಅಕ್ಷತೆಯನ್ನು ಹಚ್ಚಿ ನಂತರ ಹೂವುಗಳನ್ನು ಅರ್ಪಿಸಿ. ಭಗವಾನ್ ವಿಶ್ವಕರ್ಮನ ವಿಗ್ರಹ ಅಥವಾ ಫೋಟೋದ ಮುಂದೆ ಕಲಶವನ್ನು ಇರಿಸಿ. ಇದಾದ ನಂತರ ಕಲಶಕ್ಕೆ ಕುಂಕುಮ ಮತ್ತು ಅಕ್ಷತೆಯನ್ನು ಹಚ್ಚಿ, ನಂತರ ಈ ಮಂತ್ರವನ್ನು ಪಠಿಸಿ.
''ಓಂ ಪೃಥಿತ್ವೈ ನಮಃ
ಓಂ ಅನಂತಂ ನಮಃ
ಓಂ ಕೂಮಾಯಿ ನಮಃ
ಓಂ ಶ್ರೀ ಸೃಷ್ಟತನಯಾ ಸರ್ವಸಿದ್ಧಯಾ ವಿಶ್ವಕರ್ಮಾಯಾ ನಮೋ ನಮಃ''
ಈ ಮೇಲಿನ ಮಂತ್ರವನ್ನು ಪಠಿಸಿದ ನಂತರ, ಒಂದಿಷ್ಟು ಅಕ್ಷತೆ ಕಾಳನ್ನು ಕೈಯಲ್ಲಿ ತೆಗೆದುಕೊಂಡು ಎಲ್ಲಾ ಯಂತ್ರಗಳ ಮೇಲೆ ಸಿಂಪಡಿಸಿ. ವಿಶ್ವಕರ್ಮ ಮತ್ತು ಕಲಶದ ಸುತ್ತಲೂ, ಹೂವುಗಳನ್ನು ಸಹ ಅರ್ಪಿಸಿ. ವಿಶ್ವಕರ್ಮ ದೇವರಿಗೆ ಸಿಹಿಯನ್ನು ಅರ್ಪಿಸಿ. ಇದಾದ ನಂತರ ವಿಶ್ವಕರ್ಮರಿಗೆ ಆರತಿಯನ್ನು ಮಾಡಿ, ಪ್ರಸಾದವನ್ನು ಎಲ್ಲರಿಗೂ ವಿತರಿಸಿ.
ವಿಶ್ವಕರ್ಮ ಜಯಂತಿಯ ದಿನದಂದು ಈ ಮೇಲಿನ ಶುಭ ಮುಹೂರ್ತದಲ್ಲಿ ವಿಶ್ವಕರ್ಮರ ಪೂಜೆಯನ್ನು ಮಾಡುವುದರಿಂದ, ವಿಶ್ವಕರ್ಮ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚು ಫಲದಾಯಕವಾಗಿದೆ. ವಿಶ್ವಕರ್ಮರ ಪೂಜೆಯನ್ನು ಮಾಡುವುದರಿಂದ ವ್ಯಾಪಾರಿಗಳು, ಯಂತ್ರಗಳಲ್ಲಿ ಕೆಲಸ ಮಾಡುವವರು ಲಾಭವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.