ಗಂಗಾವತಿ : ಕಳೆದ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ಧನ ರೆಡ್ಡಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದಾರೆ. ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಬಳ್ಳಾರಿಯಲ್ಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಅವರು ಎರಡನೇ ಸ್ಥಾನದಲ್ಲಿದ್ದು,ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕೃತ ವಿರೋಧ ಪಕ್ಷವಾಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದ್ದಾರೆ.
ಗಂಗಾವತಿ ಕ್ಷೇತ್ರದ ಜನರು ನಮ್ಮ ವರಿಷ್ಠರಿಗೆ ಹೃದಯ ಸಿಂಹಾಸನದಲ್ಲಿ ರಾಜನ ಸ್ಥಾನ ಕೊಟ್ಟು ಗೆಲ್ಲಿಸಿದ್ದಾರೆ. ಬಳ್ಳಾರಿಯಲ್ಲಿ ನಮ್ಮ ಪಕ್ಷದ ಅಧಿನಾಯಕಿ ಶ್ರೀಮತಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಅವರು ಎರಡನೆಯ ಸ್ಥಾನದಲ್ಲಿದ್ದು,ನಾವು ಅಧಿಕೃತ ವಿರೋಧ ಪಕ್ಷವಾಗಿದ್ದೇವೆ ಎಂದು ಹೇಳಿದ್ದಾರೆ.
ಆಡಳಿತ ಪಕ್ಷದ ಲೋಪ,ದೋಷ ಜನವಿರೋಧಿ ನೀತಿಗಳನ್ನು ನಾವು ಮುಲಾಜಿಲ್ಲದೆ ವಿರೋಧಿಸುತ್ತೇವೆ. ಪಕ್ಷ ಕಟ್ಟಿದ ಅಲ್ಪಾವಧಿಯಲ್ಲಿಯೇ ದೊಡ್ಡ ಮಟ್ಟದ ಬೆಂಬಲ ನೀಡಿರುವ ಬಳ್ಳಾರಿ ಮಹಾನಗರ ಜನತೆಗೆ ನಾವು ನೈತಿಕ ಶಕ್ತಿಯಾಗಿ ನಿಲ್ಲುತ್ತೇವೆ ಎಂದು ಪ್ರಮಾಣ ಮಾಡಿದ್ದೇವೆ ಹಾಗೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಧಿವೇಶನ ಸೇರಿದಂತೆ ಎಲ್ಲಾ ಕಡೆಗೆ ಗಂಗಾವತಿಯ ಅಭಿವೃದ್ಧಿಯ ಜೊತೆ ಬಳ್ಳಾರಿ ಅಭಿವೃದ್ಧಿಯ ಕುರಿತು ನಮ್ಮ ವರಿಷ್ಠರು ಮಾತನಾಡಿದ್ದಾರೆ, ಮುಂದೆಯೂ ಮಾತನಾಡುತ್ತಾರೆ. ಇದರಲ್ಲಿ ಕೊಂಕು ಹುಡುಕುವ ನೀಚ ಮನಸ್ಥಿತಿ ಏಕೆ? ಬಳ್ಳಾರಿ ನಮ್ಮ ವರಿಷ್ಠರ ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿ. ಮುಂದಿನ ದಿನಗಳಲ್ಲಿ ರಾಜಕೀಯ ಯುದ್ಧ ಭೂಮಿಯೂ ಹೌದು.! ಎಂದು ಒತ್ತಿ ಹೇಳಿದ್ದಾರೆ.