ಬೈಲಹೊಂಗಲ : ಮೊಬೈಲ್ನಿಂದ ಮಕ್ಕಳನ್ನು ದೂರಿವಿರಿಸಿ ಅವರ ಸಾಮಾಜಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಇಳಿ ವಯಸ್ಸಿನಲ್ಲಿಯೂ 900 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿದ ಸಂಕೇಶ್ವರದ ಸೈಕಲ್ ಪಟು ರಮೇಶ ಪೂಜಾರಿಯವರನ್ನು ವಿವಿಧ ಸಂಘಟನೆಗಳು ಅಭಿನಂದಿಸಿವೆ.
ಅ.2ರ ಗಾಂಧಿ ಜಯಂತಿಯಂದು ಸಂಕೇಶ್ವರ ಪೊಲೀಸ್ ಠಾಣೆಯಿಂದ ಈ ಮೊಬೈಲ್ ಜಾಗೃತಿ ಸಂದೇಶದೊಂದಿಗೆ ಸೈಕಲ್ ಸವಾರಿ ಆರಂಭಿಸಿದ ಅವರು ವಿಜಯಪುರ-ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ತಲುಪಿದ್ದಾರೆ.
73 ವರ್ಷ ಹರೆಯದ ರಮೇಶ ಪೂಜಾರಿಯವರು ಈ ಹಿಂದೆಯೂ ಪುನೀತ್ ರಾಜಕುಮಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲು ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಸೈಕಲ್ನಲ್ಲಿಯೇ ತೆರಳಿ, ಪುನೀತ್ ಸಮಾಧಿಗೆ ನಮನ ಸಲ್ಲಿಸಿದ್ದರು. ಇಳಿವಯಸ್ಸಿನಲ್ಲಿಯೂ ಸಾಮಾಜಿಕ ಕಳಕಳಿ ಹೊಂದಿರುವ ರಮೇಶ ಪೂಜಾರಿಯವರನ್ನು ಬೈಲಹೊಂಗಲ ಮಾಜಿ ಶಾಸಕರಾದ ಡಾ ವಿಶ್ವನಾಥ ಪಾಟೀಲರವರು ತಮ್ಮ ಗೃಹ ಕಚೇರಿಯಲ್ಲಿ ಗೌರವಿಸಿದರು.