ದೆಹಲಿ: ಬೆಳಗಾವಿ ಗಡಿ ವಿವಾದದ ಕುರಿತು ಮಹತ್ವದ ಬೆಳವಣಿಗೆಯಾಗಿದೆ. ಬುಧವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಎಕನಾಥ್ ಶಿಂಧೆ ಜೊತೆ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಮಾತುಕತೆ ನಡೆಸಿದ ಬಳಿಕ ಬೊಮ್ಮಾಯಿ ಹಾಗೂ ಶಿಂಧೆ ಜೊತೆ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಸಭೆಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಎರಡು ರಾಜ್ಯಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಕೋರ್ಟ್ ತೀರ್ಪು ಬರುವವರೆಗೂ ಎರಡೂ ರಾಜ್ಯಗಳು ವಿವಾದಿತ ಗ್ರಾಮಗಳು, ಪಟ್ಟಣಗಳನ್ನು ತಮ್ಮದೆಂದು ಹೇಳಿಕೊಳ್ಳುವಂತಿಲ್ಲ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ.
ಗಡಿ ಸಮಸ್ಯೆ ಏನೇ ಇದ್ದರೂ ಎರಡು ರಾಜ್ಯಗಳು ರಸ್ತೆಯಲ್ಲಿ ಗಲಾಟೆ ಮಾಡುವುದಲ್ಲ. ಇದು ಸಂವಿಧಾನದ ಅನುಸಾರವಾಗಿ ಮಾಡಬೇಕು. ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿರುವ ಕಾರಣ, ಯಾವುದೇ ರಾಜ್ಯ ಈ ಜಾಗ ನಮ್ಮದು ಎಂದು ಹೇಳಿಕೊಳ್ಳುವಂತಿಲ್ಲ. ಇಂದಿನ ಸಭೆಯಲ್ಲಿ ಎರಡೂ ರಾಜ್ಯದಿಂದ ಒಟ್ಟು 6 ಸಚಿವರ ನಿಯೋಗ ಈ ಕುರಿತು ಮಹತ್ವದ ಚರ್ಚೆ ನಡೆಸಲಿದೆ. ಈ ಸಚಿವರ ಸಮಿತಿ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ಸಭೆ ನಡೆಸಿ ಶಾಶ್ವತ ಪರಿಹಾರದ ಸೂತ್ರಗಳನ್ನು ಮಂದಿಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.