ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ನಿಧನಕ್ಕೆ ಲಕ್ಷ್ಮಣ ಸವದಿ ಸಂತಾಪ
- 15 Jan 2024 , 2:50 AM
- Bengaluru
- 101
ಬೆಂಗಳೂರು: ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ನಿಧನಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ. ಇಂದು ನಿಜಕ್ಕೂ ನಮಗೆ ತುಂಬಾ ಆಘಾತದ ದಿನ. ನಮ್ಮೆಲ್ಲರ ಆತ್ಮೀಯರಾಗಿದ್ದ ಶ್ರೀ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಂತಹ ಅತ್ಯಂತ ದುರ್ದೈವದ ಘಟನೆ ನಡೆದಿರುವುದು ನಮ್ಮನ್ನು ಘಾಸಿಗೊಳಿಸಿದೆ. ಉತ್ತಮ ಸ್ನೇಹಿತರು, ಮೃದು ಭಾಷಿಗಳು, ಸಜ್ಜನ ರಾಜಕಾರಣಿಗಳು ಮತ್ತು ಸೌಮ್ಯ ಸ್ವಭಾವದ ಶ್ರೀ ಧರ್ಮೇ ಗೌಡರು ಇತ್ತೀಚೆಗೆ ವಿಧಾನಪರಿಷತ್ತಿನಲ್ಲಿ ನಡೆದ ಅಹಿತಕರ ಬೆಳವಣಿಗೆಯೊಂದರಲ್ಲಿ ಆಘಾತಗೊಂಡಿದ್ದರು. ಅವರನ್ನು ಆಗ ನಾವೆಲ್ಲ ಸಮಾಧಾನಪಡಿಸಿದ್ದೆವು. ಆದರೆ ಈಗ ದಿಡೀರ್ ಆಗಿ ಈ ದುಃಖದ ವಾರ್ತೆ ಕೇಳಿಬಂದಿರುವುದು ನಮ್ಮೆಲ್ಲರ ದುರ್ದೈವದ ಸಂಗತಿ. ನಿಜಕ್ಕೂ ಈ ದುರ್ಘಟನೆಯನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.












