ಆರ್ಥಿಕತೆಗೆ ಶಕ್ತಿ ತುಂಬವ ಬಜೆಟ್: ಹೊಸಮನಿ
- 23 Dec 2023 , 11:09 AM
- Delhi
- 125
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಶಕ್ತಿ ತುಂಬುವುದಲ್ಲದೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದ ಸದೃಢ ಬೆಳವಣಿಗೆಗೂ ಕಾರಣವಾಗಲಿದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಪ್ರತಿಕ್ರಿಯಿಸಿದ್ದಾರೆ. ಗ್ರಾಮೀಣ ಮೂಲಸೌಕರ್ಯಕ್ಕೆ 40 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದ್ದು, ಕೃಷಿಕರ ಸಾಲಕ್ಕಾಗಿ 16,500 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.

ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ, 5 ಟ್ರಿಲಿಯನ್ ಆರ್ಥಿಕತೆಯ ಗುರಿ, ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ಮೊದಲಾದ ಯೋಜನೆಗಳು ಸರ್ವ ನಾಗರಿಕರಿಗೂ ಪ್ರಯೋಜನ ನೀಡಲಿದೆ.ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.

ಒಟ್ಟು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಬೆಲೆ ಖಾತರಿ ನೀಡಲಾಗಿದೆ. 2022ರ ಹಣಕಾಸು ವರ್ಷದಲ್ಲಿ 16.5 ಲಕ್ಷ ಕೋಟಿ ಕೃಷಿ ಸಾಲ ಗುರಿ ಹೊಂದಲಾಗಿದೆ. ಗ್ರಾಮೀಣ ಮೂಲಸೌಕರ್ಯ ಮತ್ತು ನೀರಾವರಿಗೆ ಹೆಚ್ಚುವರಿ ಹಂಚಿಕೆ ಮಾಡಲಾಗಿದೆ. ಸರ್ವ ರೀತಿಯಿಂದಲೂ ಈ ಬಜೆಟ್ ಭಾರತವನ್ನು ಸಶಕ್ತವಾಗಿಸಲಿದೆ ಎಂದು ತಿಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು ಆತ್ಮನಿರ್ಭರ ಪ್ಯಾಕೇಜ್, ಕೊರೋನಾ ಮಹಾಮಾರಿ ನಿರ್ಮೂಲನೆಗಾಗಿ 35 ಸಾವಿರ ಕೋಟಿ ರೂ. ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ.ಕೇಂದ್ರದ ಮೊದಲ ಡಿಜಿಟಲ್ ಬಜೆಟ್ ಆತ್ಮನಿರ್ಭರ ಮತ್ತು ಆಯುಷ್ಮಾನ್ ಭಾರತ್ ಕೇಂದ್ರೀಕೃತ ಬಜೆಟ್ ಆಗಿದ್ದು, ಭಾರತವನ್ನು ವಿಶ್ವಗುರು ಸ್ಥಾನದತ್ತ ಕೊಂಡೊಯ್ಯುವ ಅತ್ಯದ್ಭುತ ಆಯವ್ಯಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.










