ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ
- 14 Jan 2024 , 10:00 PM
- Belagavi
- 93
ಬೆಳಗಾವಿ : ದೇಶದಲ್ಲಿ ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಪ್ರೀ ಪ್ಲ್ಯಾನ್ ಎಂಬ ಬಿಜೆಪಿ ಸರ್ಕಾರದ ಆರೋಪವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ತಳ್ಳಿ ಹಾಕಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಮೊದಲಿನಿಂದಲೇ ಕೃಷಿ ತಿದ್ದುಪಡೆ ಕಾಯ್ದೆ ಹಿಂಪಡೆಯುವಂತೆ ಹೋರಾಟ ನಡೆಸಿದ್ದಾರೆ.

ಅವರ ಬೆಂಬಲಕ್ಕೆ ಇತ್ತೀಚೆಗೆ ನಾವು ನಿಂತಿದ್ದೇವೆ. ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು. ಅನ್ನದಾತರು ದೇಶದಾದ್ಯಂತ ನಿರಂತರ ಹೋರಾಟ ಮುಂದುವರೆಸಿದ್ದಾರೆ. ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು. ಆದ್ರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ತಕ್ಷಣ ಹಠ ಮಾಡುವುದನ್ನು ಕೈ ಬಿಟ್ಟು ವಿವಾದಿತ ಕೃಷಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜ.26ರಂದು ದೆಹಲಿಯಲ್ಲಿ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ರೈತರ ಹೋರಾಟದ ದಿಕ್ಕು ಬದಲಿಸುವ ಪ್ರಯತ್ನವನ್ನು ಮಾಡಿದ್ರು ಎಂದು ಆರೋಪಿಸಿದ ಅವರು, ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಹಿಂಸಾಚಾರ ಕೃತ್ಯ ನಡೆಯಿತು. ಆದರೆ ಅವರ ಉದ್ದೇಶ ಯಶಸ್ವಿಯಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಪೋಟೋಗಳನ್ನು ನೋಡಿದ್ದಿರಿ ಎಂದರು.
ಪ್ರಧಾನಿಮೋದಿಟ್ರಂಪ್ಪರಪ್ರಚಾರ : ದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದ ಸೆಲೆಬ್ರೆಟಿಗಳು ಬೆಂಬಲಿಸಿರುವುದಕ್ಕೆ ಬಿಜೆಪಿ ವಿರೋಧಿಸುತ್ತಿರುವ ವಿಚಾರಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು, ಅಮೆರಿಕಾಗೆ ಪ್ರಧಾನಿ ಮೋದಿ ಅವರೇ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಬೇರೆ ದೇಶಕ್ಕೆ ಇವರು ಯಾಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ದೇಶಗಳಲ್ಲಿ ಅನ್ಯಾಯವಾದಾಗ ನಾವು ಕೂಡ ದನಿ ಎತ್ತಿದ್ದೇವೆ.
ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ಸೈನಿಕರು ಹೋಗಿದ್ದರು. ಬಾಂಗ್ಲಾ ದೇಶವನ್ನು ನಮ್ಮ ಇಂದಿರಾ ಗಾಂಧಿ ಅವರೇ ಪ್ರತ್ಯೇಕ ದೇಶ ಮಾಡಿದ್ದರು. ಆದರೆ ಅಮೇರಿಕಾಗೆ ಹೋಗಿ ಪ್ರಧಾನಿ ಮೋದಿ ಟ್ರಂಪ್ ಪರವಾಗಿ ಯಾಕೆ ಪ್ರಚಾರ ಮಾಡಬೇಕಿತ್ತು. ಅದು ಬೇರೆ ದೇಶ ಅಲ್ಲವೇ ಎಂದು ಕಿಡಿಕಾರಿದರು.

ಮತದಾರರತೀರ್ಮಾನಅಂತಿಮ : ಬೆಂಗಳೂರು ವಿಧಾನಸಭೆ ಅಧಿವೇಶನದಲ್ಲಿ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತ ದೇಶ ಸ್ವತಂತ್ರ ರಾಷ್ಟ್ರ, ವಾಕ್ ಸ್ವತಂತ್ರ ಇದೆ. ಹೇಳೋಕೆ ಯಾರ ಬೇಡ ಅಂದವರು, ಮಾತನಾಡಲು ಅವಕಾಶ ಇದೆ, ಮಾತನಾಡುತ್ತಾರೆ. ಕೊನೆಗೆ ಮತದಾರರು ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಕೆ.ಎಸ್.ಈಶ್ವರಪ್ಪ ಅವರೇ ಸಚಿವರಿದ್ದಾರೆ, ಪೇನ್- ಹಾಳೆ ಅವರ ಹತ್ತಿರವೇ ಇದೆ. ಆದ್ರು ಸಹ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಈಶ್ವರಪ್ಪ ಅವರು ಭಾಗಿಯಾಗಿದ್ದಾರೆ. ಈ ಬಗ್ಗೆ ಅವರೇ ಉತ್ತರ ನೀಡಬೇಕು ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.










