ಸೋಲನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು: ಡಾ. ಕಾಟ್ಕರ್
- 15 Jan 2024 , 4:00 AM
- Belagavi
- 130
ಬೆಳಗಾವಿ ಸ್ಪರ್ಧೆ ಎಂದ ಮೇಲೆ ಸೋಲು ಗೆಲವುಗಳೆನ್ನುವವು ಇದ್ದೇ ಇರುತ್ತವೆ. ಸೋಲನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಮತ್ತೆ ಗೆಲುವನ್ನು ಸಾಧಿಸಲು ಸಾಧ್ಯ. ಸೋತಾಗ ನಿರಾಶರಾಗದೇ ಮತ್ತೆ ಗೆಲವಿನ ದಾರಿಯತ್ತ ಧಾವಿಸಬೇಕು.

ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಡಾ. ಸರಜು ಕಾಟ್ಕರ್ ಇಂದಿಲ್ಲಿ ಹೇಳಿದರು. ನಗರದ ತಿಳಕವಾಡಿಯ ಕೆ. ಬಿ. ಕುಲಕರ್ಣಿ ಆರ್ಟ ಗ್ಯಾಲರಿ(ವಾರೆಕರ್ ನಾಟ್ಯ ಸಂಘ) ಸಭಾಭವನದಲ್ಲಿ ವರ್ಣಕಲಾ ಸಾಂಸ್ಕೃತಿಕ ಸಂಘದವರು ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಹಾಗೂ ರಾಜ್ಯಮಟ್ಟದ ಕಲಾಶಿಬಿರ ‘ವರ್ಣಕಲಾಶ್ರೀ’ ಪ್ರಶಸ್ತಿ ಪದಾನ ಸಮಾರಂಭದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ, ಕಾಟ್ಕರ್ ಮೇಲಿನಂತೆ ಅಭಿಪ್ರಾಯ ಪಟ್ಟರು.

ಕೆಟಲಾಗ್ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿಯವರು ಮಾತನಾಡಿ ಕಲಾವಿದರನ್ನು ಗುರುತಿಸಿ ಅವರ ಕಲೆ ಹಾಗೂ ಅವರಿಗೆ ಪ್ರಶಸ್ತಿ ಪ್ರದಾನ ನೀಡುವುದರೊಂದಿಗೆ ಪ್ರೋತ್ಸಾಹಿಸುತ್ತಿರುವ ಈ ಸಂಘಟನೆಯ ಕರ್ಯ ನಿಜಕ್ಕೂ ಶ್ಲಾಘನೀಯ.
ಸರಕಾರದಿಂದ ಸಿಗುವ ಸೌಲತ್ತುಗಳು ನೀಡುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುವೆ ಎಂದು ಹೇಳಿದರು. ಕರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡಮಿ ಅಧ್ಯಕ್ಷರಾದ ಮಹೇಂದ್ರ ಡಿ. ಅವರು ಮಾತನಾಡಿ ಅಕಾಡಮಿ ಮಾಡುವಂತಹ ಕೆಲಸವನ್ನು ವರ್ಣಕಲಾ ಸಾಂಸ್ಕೃತಿಕ ಸಂಘದವರು ಮಾಡುತ್ತಿರುವುದು ತುಂಬ ಅಭಿಮಾನದ ಸಂಗತಿ ಎಂದು ಹೇಳಿದರು.
ಬೆಂಗಳೂರಿನ ರಮೇಶ ತೇರದಾಳ, ಬೆಳಗಾವಿಯ ಬಾಳು ಸದಲಗೆ, ಚಿಕ್ಕಮಂಗಳೂರಿನ ಲಕ್ಷ್ಮಿ ಮೈಸೂರೆ ಮೈಸೂರಿನ ಬಿಂದುರಾಯ್ ಬಿರಾದಾರ, ಹುಬ್ಬಳ್ಳಿಯ ಶೇಖರ ಬಳ್ಳಾರಿ ಇವರನ್ನು ‘ವರ್ಣಕಲಾಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಅಂತರ್ರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಬೆಳಗಾವಿಯ ಉಮಾ ಕಲಾ ಸಂಸ್ಥೆಯ ಪ್ರಚಾರ್ಯೆ ಶ್ರೀಮತಿ ಶಶಿಕಲಾ ಕಮ್ಮಾರ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ಫಲಪುಷ್ಪ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ನಾಗೇಶ ಸಿ ಚಿಮರಗೋಳ, ಕರ್ಯದರ್ಶಿಗಳಾದ ಸಂತೋಷ ಎಸ್ ಮಲ್ಲೋಳಿ ಅಲ್ಲದೇ ಭಾಸ್ಕರ ಪಾಟೀಲ, ದ್ಯಾಮಪ್ಪಾ ಕಾಕಂಬಳಿ, ಸುಶೀಲ ತರಬರ, ದೀಪಾ, ಮುಂತಾದವರು ಉಪಸ್ಥಿತರಿದ್ದರು. ಕು. ಪುರೋಹಿತ ಪ್ರಾರ್ಥಿಸಿದರು. ಬಾಬು ಗಸ್ತಿ ನಿರೂಪಿಸಿದರು. ದಿಲೀಪಕುಮಾರ ಕಾಳೆ ವಂದಿಸಿದರು.










