ಮೋದಿ ಅಂಗಡಿಯಲ್ಲಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ: ಸತೀಶ ಜಾರಕಿಹೊಳಿ ವ್ಯಂಗ್ಯ
- 15 Jan 2024 , 4:27 AM
- Belagavi
- 115
ಸವದತ್ತಿ:"ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ್ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ" ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಸವದತ್ತಿ ಮತಕ್ಷೇತ್ರದ ಕಡಬಿ, ಶಿವಾಪುರ, ಯರಝರ್ವಿ ಗ್ರಾಮಗಳಲ್ಲಿ ಇಂದು ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ನಡೆಸಿ, ಅವರು ಮಾತನಾಡಿದರು.

"ಚುನಾವಣೆಗೂ ಮೊದಲು ಬಿಜೆಪಿಯವರು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಎಲ್ಲವನ್ನೂ ಅತ್ಯಂತ ಕಡಿಮೆ ದರದಲ್ಲಿ ಕೊಡುತ್ತೇವೆ ಎಂದಿದ್ದರು. ಆದರೆ, ಇಂದು ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಜನರಿಗೆ ಅವರು ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ:
"ಸುಳ್ಳು ಭರವಸೆಗಳನ್ನು ನೀಡಿ, ಜನರಿಗೆ ಮೋಸ ಮಾಡಿದ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಉಪಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಸದಾ ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು" ಎಂದು ಹೇಳಿದರು.
"ನಾನು ಕಳೆದ 25 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ವಿಧಾನ ಪರಿಷತ್ ಸದಸ್ಯನಾಗಿ, ಶಾಸಕನಾಗಿ, ಸಚಿವನಾಗಿ ಜಿಲ್ಲೆಯಾದ್ಯಂತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ, ಜನರು ನನಗೆ ಮತ ನೀಡಬೇಕು" ಎಂದು ಮನವಿ ಮಾಡಿದರು.
ಮಾಜಿ ಶಾಸಕ ಜಿ.ಟಿ. ಪಾಟೀಲ, ಮುಖಂಡರಾದ ಪಂಚನಗೌಡ ದ್ಯಾಮನಗೌಡ, ವಿಶ್ವಾಸ ವೈದ್ಯ, ರವಿ ಯಲಿಗಾರ, ಸೌರವ ಚೋಪ್ರಾ, ಜಯಪ್ಪ ಹುಂಡೇಕರ್, ಆರ್.ವಿ. ಪಾಟೀಲ ಸೇರಿ ಇನ್ನಿತರರು ಇದ್ದರು.










