ಬೆಳಗಾವಿಯ 12 ಜನ ಪತ್ರಕರ್ತರಿಗೆ ಪಾಸಿಟಿವ್

ಬೆಳಗಾವಿ: ಲೋಕಸಭಾ ಉಪ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿಯ ಸುಮಾರು 70 ಜನ ಮಾಧ್ಯಮ ಪ್ರತಿನಿಧಿಗಳ ಕೋವಿಡ್ ಪರೀಕ್ಷೆ (ಆರ್.ಟಿ-ಪಿಸಿಆರ್) ಮಾಡಿದಾಗ ಅದರಲ್ಲಿ 12 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಮಾಧ್ಯಮ ವಲಯದಲ್ಲಿ ಆತಂಕ ಸೃಷ್ಟಿಸಿದೆ.

promotions

12 ಜನರ ಪೈಕಿ 11 ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಈ 12 ಜನರಲ್ಲಿ ಪತ್ರಕರ್ತರು ಹಾಗೂ ಕ್ಯಾಮರಾಮೆನ್‌ಗಳೂ ಇದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರು ಹೋಮ್ ಐಸೋಲೇಷನ್ ಇರಬೇಕಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಔಷೋಧಪಚಾರ ಮಾಡುತ್ತಿದ್ದಾರೆ. ವಾರ್ತಾ ಇಲಾಖೆಯ ವಾಚ್‌ಮನ್‌ಗೂ ಸೋಂಕು ದೃಢಪಟ್ಟಿದೆ.

promotions

ಈಗಾಗಲೇ ಈ ವಿಷಯವನ್ನು ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲದವರಿಗೆ ಖಾಸಗಿ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ವ್ಯವಸ್ಥೆ ಕಲ್ಪಿಸಲು ಪಬ್ಲಿಕ್ ಟಿವಿಯ ವರದಿಗಾರ ದಿಲೀಪ್ ಕುರಂದವಾಡೆ ಅವರು ಮುಂದಾಗಿದ್ದಾರೆ.

ಕೆಲವರು ಮನೆಯಲ್ಲಿಯೇ ಇದ್ದುಕೊಂಡು ಔಷಧೋಪಚಾರ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಗಳಿಗೆ ತೆರಳಿ ಔಷಧ ಸಾಮಗ್ರಿಗಳನ್ನು ನೀಡಲಿದ್ದಾರೆ. ಸಮಾಜದ ಹಿತರಕ್ಷಣೆಗೆ ಹಗಲಿರುಳು ದುಡಿಯುವ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಮುನ್ನುಗ್ಗುವ ಮಾಧ್ಯಮ ಸ್ನೇಹಿತರು ಈಗ ಸೋಂಕಿಗೆ ತುತ್ತಾಗಿರುವುದು ಎಲ್ಲರಿಗೂ ಬೇಸರದ ಸಂಗತಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಅವರ ನೆರವಿಗೆ ನಿಲ್ಲೋಣ.

ಎಲ್ಲರ ಕುಟುಂಬದ ಪರಿಸ್ಥಿತಿ ಒಂದೇ ತೆರನಾಗಿರುವುದಿಲ್ಳ. ಅನೇಕ ಜನರು ತಮ್ಮ ನೋವು ನುಂಗಿಕೊಂಡು ನಗುತ್ತಿರುತ್ತಾರೆ. ಅಂಥವರಿಗೆ ನಿಮ್ಮ ಜತೆ ನಾವಿದ್ದೇವೆ ಎಂದು ಭರವಸೆ ಮೂಡಿಸಿ ಅವರಿಗೆ ಸೂಕ್ತ ಔಷಧೋಪಚಾರ ಒದಗಿಸಿ ಅವರ ಆತ್ಮಸ್ಥೈರ್ಯವನ್ನು ಹೆಚ್ವಿಸೋಣ ಎಂದು ಗುರುನಾಥ ಕಡಬೂರು ತಿಳಿಸಿದ್ದಾರೆ.

Read More Articles