ಪಿಯುಸಿ ಪರೀಕ್ಷೆ ರದ್ದಾದರೇ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಯಾಕೆ?: ಸರ್ಕಾರಕ್ಕೆ ಸತೀಶ ಜಾರಕಿಹೊಳಿ ಪ್ರಶ್ನೆ

ಬೆಳಗಾವಿ: "ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೇ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು?" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

promotions

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇಂದು ನಡೆಯಲಿರುವ ಸಭೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು" ಎಂದರು.

promotions

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಿ:

"ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಯಸ್ಸಿನ ಅಂತರ ಎರಡು ವರ್ಷವಷ್ಟೇ. ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ. ಅಂದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು" ಎಂದು ಒತ್ತಾಯಿಸಿದರು.

"ಕೇಂದ್ರ ಸರ್ಕಾರವು ಸಿಬಿಎಸ್ಇ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಪಡಿಸಿದೆ. ಕೇಂದ್ರದಿಂದ ಒಂದು ನಿರ್ಧಾರ ರಾಜ್ಯದಿಂದ ಒಂದು ನಿರ್ಧಾರ ಸರಿಯಲ್ಲ. ಎಲ್ಲರಿಗೂ ಒಂದೇ ಕಾನೂನು" ಎಂದು ಹೇಳಿದರು.

ಪೂರ್ವಸಿದ್ಧತೆ ಕೈಗೊಳ್ಳುವುದು ಕಷ್ಟವಿದೆ:

"ಪರೀಕ್ಷೆ ನಡೆಸಲೇಬೇಕು ಎಂದಾದರೇ ಪೂರ್ವಸಿದ್ಧತೆ ಕೈಗೊಳ್ಳುವುದು ಕಷ್ಟವಿದೆ. ಎಷ್ಟೇ ಮುಂಜಾಗೃತೆ ವಹಿಸುತ್ತೇವೆಂದರೂ ಸಾಧ್ಯವಾಗುವುದಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ರದ್ದುಪಡಿಸುವುದು ಉತ್ತಮ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು" ಎಂದರು.

"ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವುದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವೂ ಇರಬಹುದು. ಆದರೆ, ಮಕ್ಕಳ ಆರೋಗ್ಯವೇ ಮುಖ್ಯವಾಗುತ್ತದೆ" ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Read More Articles