ಶನಿವಾರವೂ ಹಲವೆಡೆ ಪ್ರತಿಭಟನೆ: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ:

promotions

ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶನಿವಾರವೂ ಪ್ರತಿಭಟನೆ ನಡೆಯಿತು. ಶನಿವಾರ ಕ್ಷೇತ್ರದ ಮೊದಗಾ, ಬಡಸ್ ಕೆ ಎಚ್ ಗ್ರಾಮಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಧ್ಯಮ ವರ್ಗದವರನ್ನು ಬಡವರನ್ನಾಗಿ, ಬಡವರನ್ನು ಬೀದಿಗೆ ಬರುವಂತೆ ಮಾಡಿರುವ ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ಸರಕಾರಗಳು ಶ್ರೀಮಂತರಿಗೆ ಮಾತ್ರ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಲು ನೆರವಾಗುತ್ತಿವೆ. ಇಡೀ ದೇಶದಲ್ಲಿ ಅತ್ಯಂತ ಕೆಟ್ಟ ಸ್ಥಿತಿ ತಂದಿಟ್ಟಿದೆ. ನಮಗೆ ಇಂತಹ ಅಚ್ಚೇದಿನ್ ಬೇಕಾಗಿಲ್ಲ, ಕಾಂಗ್ರೆಸ್ ಆಳ್ವಿಕೆಯಲ್ಲಿದ್ದಂತಹ ದಿನಗಳೇ ಸಾಕು ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ ಎಂದರು.

promotions

 

ಕಳೆದ ವರ್ಷದಿಂದ ಯಾವುದೇ ದುಡಿಮೆಯಿಲ್ಲದೆ ಬಡವರು, ರೈತರು, ಶ್ರಮಿಕರು ಕಂಗಾಲಾಗಿದ್ದರೆ ಇದರ ಬೆನ್ನಲ್ಲೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೆ ಏರಿಸುವುದು ಎಷ್ಟು ಸರಿ. ಬಡ ಜನರು ಬದುಕುವುದೋ? ಬೇಡವೋ? ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೇಳಬೇಕಾಗಿದೆ ಎಂದು ಹೆಬ್ಬಾಳಕರ್ ಪ್ರಶ್ನಿಸಿದರು. ಬಿಜೆಪಿ ಸರ್ಕಾರಗಳಿಗೆ ದೇಶದ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ, ಕನಿಕರ ಇದ್ದರೆ, ಕೂಡಲೇ ಅಗತ್ಯ ವಸ್ತುಗಳ, ಕಾಳು ಕಡಿಗಳ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಮುಂತಾದ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಲಿ ಎಂದು ಆಗ್ರಹಿಸಿದರು.

ಮೋದಗಾದಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್ ಆವರಣದಲ್ಲಿ #Petrol100NotOut ಎಂಬ ಹೆಸರಿನ ಆಂದೋಲನದ ಮೂಲಕ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ಜನ ಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read More Articles