ಇತ್ತೀಚಿಗೆ ಅಗಲಿದ ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ ಅವರಿಗೆ ದಿ.28 ರಂದು ನುಡಿನಮನ

ಧಾರವಾಡ: ಇತ್ತೀಚೆಗೆ ಅಗಲಿದ ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ ಅವರಿಗೆ ದಿ.28 ರಂದು ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ತಿಳಿಸಿದರು.

promotions

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಕರ್ನಾಟಕ ರೈತ ಸಂಘ ಹಾಗೂ ಬಾಬಾಗೌಡ ಪಾಟೀಲರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ರಸ್ತೆಯಲ್ಲಿರುವ ನರೇಂದ್ರ ಕ್ರಾಸ್ ಬಳಿ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

promotions

ಅಂದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಆರ್. ಪಾಟೀಲ, ದೇವದಾಸಿ ವಿಮೋಚನಾ ಸಂಸ್ಥೆಯ ಬಿ.ಎಲ್.ಪಾಟೀಲ, ಅಖಂಡ ಕರ್ನಾಟಕ ರೈತ ಸಂಘದ ಪ್ರಮುಖರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು. ರೈತ ಮುಖಂಡ ಶಿವಾನಂದ ಹೊಳೆಹಡಗಲಿ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಬಾಬಾಗೌಡರು ರೈತ ಪರ ಗಟ್ಟಿ ಧ್ವನಿಯಾಗಿದ್ದರು.

ಈ ಮೂಲಕ ರೈತ ವಿರೋಧಿ ಸರಕಾರಗಳನ್ನು ಎಚ್ಚರಿಸುತ್ತ ಬಂದಿದ್ದರು. ಅವರ ತತ್ವಗಳನ್ನು ಪಾಲಿಸುವ ಶಫಥ ಮಾಡಲಾಗುವುದು ಎಂದರು. ಇನ್ನೋರ್ವ ಮುಖಂಡ ಕೇಶವ ಯಾದವ ಮಾತನಾಡಿ, ಪ್ರೊ.ಎಂ.ಡಿ.ನಂಜುಂಡ ಸ್ವಾಮಿ, ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ ಅನೇಕ ಮುಖಂಡರ ಜೊತೆ ಸೇರಿ ರೈತರಲ್ಲಿ ಸ್ವಾಭಿಮಾನ ಮತ್ತು ಜಾಗೃತಿ ಮೂಡಿಸಿದವರು ಬಾಬಾಗೌಡರು.

ರೈತರು, ಕಾರ್ಮಿಕರ ಹಿತಕ್ಕೆ ಜೀವನವಿಡಿ ಶ್ರಮಿಸಿದರು. ಅವರನ್ನು ಸ್ಮರಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಗುವುದು ಎಂದರು. ಮುಖಂಡರಾದ ಗುರುರಾಜ ಹುಣಸಿಮರದ, ಸಿದ್ದಣ್ಣ ಕಂಬಾರ,, ಉಳವಪ್ಪ ಒಡೆಯರ, ಮಲ್ಲಿಕಾರ್ಜುನ ಹಡಪದ, ಭೀಮಣ್ಣ ಕಾಸಾಯಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Read More Articles