ಎಂ.ಕೆ.ಹುಬ್ಬಳ್ಳಿಯಲ್ಲಿ ರಂಗಾಯಣ ನಾಟಕ ಸಿದ್ಧತಾ ಶಿಬಿರ
- 14 Jan 2024 , 10:21 PM
- Belagavi
- 160
ಎಂ.ಕೆ.ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸುತ್ತಿರುವ "ಸರ್ವರಿಗೂ ಸಂವಿಧಾನ" ಹಾಗೂ ಕೊರೊನಾ ಜಾಗೃತಿಗಾಗಿ ನಿರ್ಮಿಸುತ್ತಿರುವ ನಾಟಕಗಳ ಸಿದ್ಧತಾ ಶಿಬಿರ ಎಂ.ಕೆ.ಹುಬ್ಬಳ್ಳಿ ಹತ್ತಿರದ ಅನುಭವ ಮಂಟಪದ ಮಂಗಲ ಕಾರ್ಯಾಲಯದಲ್ಲಿ ನಡೆಯುತ್ತಿದೆ.

ವಿಶ್ವಮಾನವ,ಭಾತೃತ್ವ,ಸಮಾನತೆ ಆಶಯಗಳೊಂದಿಗೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿರುವ ಸಂವಿಧಾನ ಭಾರತೀಯರು ಅಷ್ಟೇ ಅಲ್ಲದೆ ವಿಶ್ವದ ಎಲ್ಲರಿಗೂ ಮಾನವ ಹಕ್ಕುಗಳನ್ನು ಖಾತರಿಪಡಿಸಿದೆ. ಸಂವಿಧಾನ ಮೂಲ ಮಂತ್ರ ಮಾನವೀಯತೆಯಾಗಿದೆ. ಸಂವಿಧಾನವೆಂದರೆ ಬರಿ ವಿಧಿ ಹಾಗೂ ಉಪವಿಧಿಗಳ ಲೆಕ್ಕವಲ್ಲ. ರಾಜ್ಯಾಧಿಕಾರದ ನೀತಿ ನಿರೂಪಣೆಯೊಂದಿಗೆ ಸಂವಿಧಾನ ಐತಿಹಾಸಿಕವಾಗಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಪ್ರಜಾಪ್ರಭುತ್ವದ ಮೂಲ ಆಶಯದಂತೆ ರಾಜ್ಯಾಧಿಕಾರದಲ್ಲಿ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ಒದಗಿಸುವ ಕಾರ್ಯ ಸಂವಿಧಾನದ ಮೂಲಕ ಜಾರಿಗೆ ತರಲಾಗಿದೆ. ಸಂವಿಧಾನ ದೇಶದ ಎಲ್ಲಾ ಜನರ ಆಶಯವನ್ನು ಪ್ರತಿನಿಧಿಸುವ ಪವಿತ್ರ ಗ್ರಂಥವಾಗಿದೆ. ದೇಶದ ಐತಿಹಾಸಿಕ ವೈಭವದ ರಕ್ಷಣೆ ಜೊತೆಗೆ ಜನರ ಭಾವನಾತ್ಮಕ ಬೆಸಯುವ ಕೆಲಸ, ಪ್ರಾಕೃತಿಕ ರಕ್ಷಣೆ, ಜೀವ ವೈವಿಧ್ಯತೆ ಹಾಗೂ ರಾಷ್ಟ್ರದ ಸಾರ್ವಭೌಮತ್ವವನ್ನು ಸಂವಿಧಾನ ಕಾಪಾಡುತ್ತದೆ. ಜನಸಾಮಾನ್ಯರಿಗೆ ಸಂವಿಧಾನದತ್ತ ಅವಕಾಶಗಳನ್ನು ಮನದಟ್ಟು ಮಾಡಿಸುವ ರೀತಿಯಲ್ಲಿ ನಾಟಕ ರೂಪಿಸಲು ಶ್ರಮಿಸಲಾಗುತ್ತಿದೆ ಎಂದು ನಾಟಕ ನಿರ್ದೇಶಕ ಬಾಬಾಸಾಹೇಬ ಕಾಂಬ್ಳೆ ಹೇಳಿದರು.

ಇದೇ ಸಂದರ್ಭದಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ಕೊರೊನಾ ಜಾಗೃತಿಗಾಗಿ ಸಿದ್ಧಪಡಿಸುತ್ತಿರುವ ನಾಟಕ ಮಲ್ಲಪ್ಪ ಹೊಂಗಲ್(ಮೊಬೈಲ್ ಮಲ್ಲ) ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ.
ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ , ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 40 ಕಲಾವಿದರು ಎರಡು ನಾಟಕಗಳ ತರಬೇತಿ ಪಡೆಯುತ್ತಿದ್ದಾರೆ,ಯೋಗಾಭ್ಯಾಸ,ಸಂಗೀತ ಮತ್ತಿತರ ಪೂರಕ ಚಟುವಟಿಕೆಗಳು ಕೂಡ ನಡೆಯುತ್ತಿವೆ.ಜುಲೈ ಅಂತ್ಯದವರೆಗೆ ಶಿಬಿರ ನಡೆಯಲಿದೆ.










