ಒಂದು ವರ್ಷದಿಂದ ನಗರದ ಅಭಿವೃದ್ಧಿ ಕುಂಠಿತ; ಬಿಜೆಪಿ ಶಾಸಕರೇ ಸ್ಪಷ್ಟೀಕರಣ ನೀಡಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ:ಬಿಜೆಪಿಯ ಇಬ್ಬರು ಶಾಸಕರ ಅಸಹಕಾರದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗ್ಗೆ ಶಾಸಕರೇ ಸ್ಪಷ್ಟೀಕರಣ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

promotions

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿಲ್ಲ. ಪದೇ ಪದೇ ಸಭೆ ಮುಂದಕ್ಕೆ ಹೋಗುತ್ತಿರುವುದಕ್ಕೆ ಬಿಜೆಪಿಯ ಇಬ್ಬರು ಶಾಸಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

promotions

ಅಭಿವೃದ್ಧಿ ಕುಂಠಿತ:

ಸ್ಥಳೀಯ ಇಬ್ಬರು ಶಾಸಕರು ಅಧ್ಯಕ್ಷರಿಗೆ ಸಹಕಾರ ನೀಡುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನೂ ಕೂಡ ಬಿಜೆಪಿ‌ ಶಾಸಕರು ಸಭೆಗೆ ಹೋಗಲು ಬಿಡುತ್ತಿಲ್ಲ. ಈ ಬಗ್ಗೆ ಬುಡಾ ಅಧ್ಯಕ್ಷರೇ ಹೇಳಿಕೆ ನೀಡಿದ್ದಾರೆ. ಇದಕ್ಕೆ ಶಾಸಕರೇ ಸ್ಪಷ್ಟನೆ ನೀಡಬೇಕು ಎಂದರು.

ಬುಡಾದಲ್ಲಿ ನಾವು ಮಂಜೂರು ಮಾಡಿದ ಕೆಲಸಗಳು ಇನ್ನೂ ಪೆಂಡಿಗ್ ಇವೆ. ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನ, ಸಹಾಯಧನ, ಪ್ರೋತ್ಸಾಹ ಧನ ಕಟ್ ಆಗಿದೆ‌. ಇದಕ್ಕೆ ಬಿಜೆಪಿ ಶಾಸಕರೇ ಪರಿಹಾರವನ್ನು ಕಂಡುಕೊಳ್ಳಬೇಕು‌ ಎಂದು ಹೇಳಿದರು.

ಮೇಯರ್ ಆಯ್ಕೆಯಾಗಲು ಒಂದು ವರ್ಷ ಬೇಕು: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರು ಕೂಡ ಇದುವರೆಗೂ ಮೇಯರ್ ಆಯ್ಕೆಯಾಗಿಲ್ಲ. ಮೇಯರ್, ಉಪಮೇಯರ್ ಆಗಲು ಒಂದು ವರ್ಷ ಬೇಕೆ ಬೇಕು ಎಂದು ನನಗನಿಸುತ್ತದೆ. ಬೆಳಗಾವಿಯಲ್ಲಿ ವ್ಯವಸ್ಥೆ ಹಾಗೆಯೇ ಇದೆ. ಕಳೆದ ಮೂರು ವರ್ಷಗಳಿಂದ ಸ್ಥಳೀಯ ಶಾಸಕರೇ ಇಲ್ಲಿ ದರ್ಬಾರ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆ:

ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ. ಹಾನಗಲ್ ನಲ್ಲಿ ಪಕ್ಷದ ಅಭ್ಯರ್ಥಿಗಳ ನಡುವೆ ಇದ್ದ ಗೊಂದಲ ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ ಎಂದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತರು ಡಿಕೆಶಿ ಭೇಟಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನು ಸಂದೇಶ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟ ಉತ್ತರ ಕೊಡಬೇಕು. ನನ್ನ ಬಳಿ ಉತ್ತರ ಇಲ್ಲ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಂತೆ ಆಗಿದ್ದಾರೆ: ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಈಗ ವಿರೋಧ ಪಕ್ಷದಲ್ಲಿ ಇದ್ದಂತೆ ಆಗಿದೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ಮೇಲೆ ವಿರೋಧ ಪಕ್ಷದವರಂತೆ ಕಾಣಲಾಗುತ್ತಿದೆ. ಬಿಜೆಪಿಯಲ್ಲಿ ಆತಂರಿಕ ಸಮಸ್ಯೆಗಳು ಇವೆ. ಕಾಲವೇ ಈ ಬಗ್ಗೆ ಎಲ್ಲವನ್ನೂ ಹೇಳಲಿದೆ ಎಂದರು.

Read More Articles