ಕನಕದಾಸರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನ : ಸಿಎಂ

ಬೆಂಗಳೂರು:ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

promotions

ಅವರು ಇಂದು ಶಾಸಕರ ಭವನದ ಆವರಣದ ಬಳಿ ಇರುವ ಸಂತ ಕವಿ ಶ್ರೀ ಕನಕದಾಸರ ಪುತ್ಥಳಿಯ ಬಳಿ ಕನಕದಾಸ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

promotions

ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು.ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ತಿಳಿಸಿದರು.

ಕನಕದಾಸರು ಪರಿವರ್ತನೆಯ ಹರಿಕಾರ:

ಶಿಗ್ಗಾವಿಯಲ್ಲಿ ಹುಟ್ಟಿ ಕರ್ಮಭೂಮಿ ಕಾಗಿನೆಲೆ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು.ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ- ಎಂದು ಮಾರ್ಮಿಕವಾಗಿ ತಿಳಿಸಿದ ಅವರು ರಚಿಸಿರುವ ರಾಮಧಾನ್ಯಚರಿತಾ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ವಆದರ್ಶಗಳು ಇಂದಿಗೂ ಪ್ರಸ್ತುತ.ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ , ಪ್ರಗತಿ ಸಾಧಿಸಲು ಸಾಧ್ಯವಿದೆ. ಪರಿವರ್ತನೆಯ ಹರಿಕಾರರು, ತಮ್ಮ ರಾಜಸತ್ವವನ್ನು ಬಿಟ್ಟು, ಅವರು ದಾಸಶ್ರೇಷ್ಠರಾಗಿದ್ದಾರೆ ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ :

ಸಂತರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಕಾಗಿನೆಲೆಯಲ್ಲಿ ಅರಮನೆ, ಸ್ಮಾರಕ ನಿರ್ಮಿಸಲಾಗಿದೆ. ಇದೇ ವೈಚಾರಿಕತೆಗೆ ಸೇರಿದ ಸಂಗೊಳ್ಳಿ ರಾಯಣ್ಣನ ಸಮಾಧಿ ಹಾಗೂ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಒಟ್ಟು 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ನಮ್ಮ ಯುವಕರ ಆದರ್ಶಪ್ರಾಯ ಬದುಕಿಗೆ ಶಿಸ್ತಿನ ಸೈನಿಕ ಶಾಲೆಯನ್ನು ನಿರ್ಮಿಸಿ ಕೇಂದ್ರದ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಈ ಶಾಲೆಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಇಚ್ಛೆಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

Read More Articles