ನೀವು ಎಚ್ಚರಗೊಳ್ಳಿ - ಇತರರನ್ನೂ ಎಚ್ಚರಗೊಳಿಸಿ:ಸ್ವಾಮಿ ವಿವೇಕಾನಂದ.

ಇಲ್ಲದಿದ್ದರೆ.....
ಒಂದೇ ಕುಟುಂಬಗಳು,
ಒಂದೇ ಮನೆತನಗಳು,
ಒಂದೇ ರಕ್ತ ಸಂಬಂಧಗಳು,
ಒಂದೇ ಹಣ ದಾಹಿಗಳು,
ಒಂದೇ ಜಾತಿಯವರುಗಳು,
ಒಂದೇ ಭ್ರಷ್ಟಾಚಾರಿಗಳು,
ಒಂದೇ ಸುಳ್ಳುಗಾರರು,
ಒಂದೇ ಮೌಢ್ಯದವರು,

ಹೀಗೆ ಅವರುಗಳೇ ನಮ್ಮ ಬದುಕನ್ನು ನಿಯಂತ್ರಿಸುತ್ತಾರೆ. ನಾವು ಅವರ ಅಡಿಯಾಳುಗಳಾಗಿ ಇಡೀ ನಮ್ಮ ಜೀವನವನ್ನು ಅವರ ನೆರಳಿನಲ್ಲಿ ಕಳೆಯಬೇಕಾಗುತ್ತದೆ. ನಮ್ಮ ಸ್ವಾತಂತ್ರ್ಯ, ನಮ್ಮ ಚಿಂತನೆ, ನಮ್ಮ ಕ್ರಿಯಾತ್ಮಕತೆಗೆ ಬೆಲೆಯೇ ಇರುವುದಿಲ್ಲ.

promotions

ಕರ್ನಾಟಕದ ವಿಧಾನಸಭೆಯ ಮೇಲ್ಮನೆ ಕೆಳಮನೆಗಳಿಗೆ ಆಯ್ಕೆಯಾಗುವ ಜನ ಪ್ರತಿನಿಧಿಗಳ ಗುಣಮಟ್ಟ ನೋಡಿದರೆ ಮತದಾರರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಉಂಟಾಗುತ್ತದೆ.

promotions

ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರ ಮಾತಿನಂತೆ ನಾವು ಮಾತ್ರವಲ್ಲ ಇತರರನ್ನು ಎಚ್ಚರಗೊಳಿಸುವ ಜವಾಬ್ದಾರಿ ನಮ್ಮದಾಗಬೇಕು.

ಅದು ಯಾವ ನಿಟ್ಟಿನಲ್ಲಿ ಇರಬೇಕೆಂದರೆ...
ಒಬ್ಬ ಅಧಿಕಾರಿಗೆ ಲಂಚದ ಹಣ ಇನ್ನೊಬ್ಬರ ಬೆವರು - ಎಂಜಲು ಎನಿಸಬೇಕು.
ಶ್ರೀಮಂತರ ಚಿನ್ನ, ಒಡವೆ, ಕಾರುಗಳ ಪ್ರದರ್ಶಕ ಮನೋಭಾವ, ಜನ ಸಾಮಾನ್ಯರಿಗೆ ಅಸಹ್ಯ ತರಿಸಬೇಕು.
ಕೋಟ್ಯಾಂತರ ರೂಪಾಯಿ ಖರ್ಚಿನ ಮದುವೆಗಳು, ಪ್ರಜೆಗಳಿಗೆ ಬಹಳಷ್ಟು ಕೋಪ ಬರಿಸಬೇಕು.
ಈ ಮದುವೆಗಳ ಟಿವಿ ಚಾನಲ್ ನೇರ ಪ್ರಸಾರ ವೀಕ್ಷಕರಿಗೆ ವಾಕರಿಕೆ ಬರುವಂತಾಗಬೇಕು.
ಪುಢಾರಿಗಳಿಗೆ ಜೈಕಾರ ಹಾಕುವುದು ಜನರಿಗೆ ಅವಮಾನವೆನಿಸಬೇಕು.
ಅಯೋಗ್ಯ ಸ್ವಾಮಿ ಪಾದ್ರಿ ಮೌಲ್ವಿಗಳ ಕಾಲು ಮುಗಿಯಲು ಭಕ್ತರಿಗೆ ನಾಚಿಕೆಯಾಗಬೇಕು.
ಜ್ಯೋತಿಷಿಗಳ ಬಳಿ ಕೈ ತೋರಿಸಿ ಭವಿಷ್ಯವನ್ನು ಕೇಳುವವರಿಗೆ ತಮ್ಮ ಬಗ್ಗೆ ಕೀಳರಿಮೆ ಬರಬೇಕು.
ಜಾತಿಯ ಸಮಾವೇಶಗಳಲ್ಲಿ ಭಾಗವಹಿಸಲು ಜನರ ಮನಸ್ಸಿಗೆ ಕಹಿ ಎನಿಸಬೇಕು.
ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಸಾಹಿತಿಗಳ ಮನಸ್ಸಿಗೆ ನೋವಾಗಬೇಕು.
ಸನ್ಮಾನಿಸಿಕೊಳ್ಳುವ ನಕಲಿ ಸಮಾಜ ಸೇವಕರಿಗೆ ಆತ್ಮಸಾಕ್ಷಿ ಚುಚ್ಚಬೇಕು.
ಬಡವರ ನರಳಾಟ ರಾಜಕಾರಣಿಗಳಿಗೆ ಕಣ್ಣೀರು ಬರಿಸಬೇಕು.
ಇಲ್ಲದವರ ಮುಂದೆ ಸೂಟು ಬೂಟುಗಳು ಅಸಹ್ಯ ಹುಟ್ಟಿಸಬೇಕು. ಗುಡಿಸಲ ಮುಂದೆ ಭವ್ಯ ಬಂಗಲೆಗಳಲ್ಲಿರುವವರಿಗೆ ಪಶ್ಚಾತ್ತಾಪವಾಗಬೇಕು.
ವರದಕ್ಷಿಣೆಯ ಹಣ ತೆಗೆದುಕೊಳ್ಳುವವರಿಗೆ ಪ್ರಾಣಸಂಕಟವಾಗಬೇಕು.
ಹೀಗೆ ನಿಮಗನಿಸಿದಲ್ಲಿ ನೀವು ಮಾನವೀಯವಾಗಿರುವಿರೆಂದು ಭಾವಿಸಬಹುದು.
ಹೀಗೆ ನಿಮಗೆ ಆತ್ಮಾವಲೋಕನವಾದಲ್ಲಿ ನೀವು ನಾಗರಿಕರೆಂದು ಹೇಳಬಹುದು.
ಈ ಅರಿವು ನಿಮಗಾದಲ್ಲಿ ನಿಮ್ಮ ವ್ಯಕ್ತಿತ್ವ ಉತ್ತಮ ಮಟ್ಟದಲ್ಲಿ ರೂಪಗೊಂಡಿದೆಯೆಂದು ತಿಳಿಯಬಹುದು.
ಈ ಅರಿವು ಮೂಡುವವರೆಗೂ ನಾವಿನ್ನು ಅನಾಗರಿಕರು ಎಂದೇ ಪರಿಗಣಿಸಬೇಕು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ
ವಿವೇಕಾನಂದ.ಹೆಚ್.ಕೆ . 9844013068

Read More Articles