ಪ್ರವಾಹ ಪರಿಹಾರ ತಕ್ಷಣ ಬಿಡುಗಡೆ: ಕಾರಜೋಳ
- 15 Jan 2024 , 12:06 AM
- Belagavi
- 95
ಬೆಂಗಳೂರು: ಪ್ರವಾಹ ಮತ್ತು ಮಳೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ಕಾರವಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಬಸ್ ಶೆಲ್ಟರ್ ಮತ್ತು ಸಮುದಾಯ ಭವನಗಳಲ್ಲಿ ಇನ್ನೂ ಜನ ವಾಸಿಸುತ್ತಿದ್ದು, ಅಂಥವರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಲು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು ಇಂದು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು.

ತಕ್ಷಣ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇಂಥ ಪ್ರಕರಣಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಬೆಳಗಾವಿ ಪ್ರಕರಣಗಳ ಬಗ್ಗೆ ಸಚಿವ ಕಾರಜೋಳ ಪ್ರಸ್ತಾಪಿಸಿದರು.

ವಿವರಗಳನ್ನು ಒದಗಿಸಿದ ಬೆಳಗಾವಿ ಜಿಲ್ಲಾಧಿಕಾರಿ 7600 ಪ್ರಕರಣಗಳ ಪುನರ್ ಪರಿಶೀಲನೆ ಮತ್ತು 4 ರಿಂದ 5 ಸಾವಿರ ಪ್ರಕರಣಗಳಲ್ಲಿ ಮೇಲ್ವಿಚಾರಣೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ತಕ್ಷಣ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸಚಿವ ಕಾರಜೋಳ ಸೂಚಿಸಿದರು.










