ಸುತ್ತೂರು ಏತ ನೀರಾವರಿ ಯೋಜನೆ ಮೊದಲ ಹಂತ ಆಗಸ್ಟ್ ನಲ್ಲಿ ಪೂರ್ಣ; ರಮೇಶ ಜಾರಕಿಹೊಳಿ

  • 14 Jan 2024 , 11:35 PM
  • Mysuru
  • 155
ಮೈಸೂರು: ಕಪಿಲಾ ನದಿ ನೀರನ್ನು 11 ಕೆರೆಗಳಿಗೆ ಹರಿಸುವ ಸುತ್ತೂರು ಏತ ನೀರಾವರಿ ಯೋಜನೆಯು ಆಗಸ್ಟ್ ವೇಳೆಗೆ ಮುಗಿಯಲಿದೆ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ ಲ. ಜಾರಕಿಹೊಳಿ ಅವರು ಶುಕ್ರವಾರ ತಿಳಿಸಿದರು.
ಶುಕ್ರವಾರ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಅಂದಾಜು ಮೊತ್ತ ರೂ. 233 ಕೋಟಿಗಳಲ್ಲಿ ಕೈಗೊಳ್ಳಲಾಗಿದ್ದು, ನಂಜನಗೂಡಿನ 2, ಚಾಮರಾಜನಗರದ 21 ಹಾಗೂ ಯಳಂದೂರಿನ 1 ಕೆರೆಗೆ ನೀರು ಹರಿಯಲಿದೆ ಎಂದರು.
ಮೊದಲ ಹಂತದಲ್ಲಿ 11 ಕೆರೆಗಳಿಗೆ 2ನೇ ಹಂತದಲ್ಲಿ ಇನ್ನುಳಿದ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಇದರಿಂದ ಅಂತರ್ಜಲವೂ ಅಭಿವೃದ್ಧಿಯಾಗಲಿದ್ದು, ಆ ಭಾಗದ ಕೊಳವೆಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಇದರಿಂದ ಹಲವಾರು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮಕೆರೆ, ಕುಂಕೆರೆ, ಚಾಮರಾಜನಗರ ತಾಲ್ಲೂಕಿನ ಜನ್ನೂರುಕೆರೆ, ಬಾಗಲಿ, ಉಮ್ಮತ್ತೂರು, ಯಡಿಯೂರು ಅಡ್ಡಹಳ್ಳ, ದೊಡ್ಡರಾಯಪೇಟೆ, ಹೊಮ್ಮ, ಕಣ್ಣೇಗಾಲ, ಕೋಡಿಮೊಳೆ, ಅಂಬ್ಲೆ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಿಗೆರೆ, ಮರಗದಕೆರೆ, ಬಂಡಿಗೆರೆ, ನಗರದ ಕೆರೆ, ಸರಗೂರು ಮೋಳೆ, ಹೆಬ್ಬಳ್ಳ, ಮಲ್ಲದೇವನಹಳ್ಳಿ, ಪುಟ್ಟನಪುರ, ಹೊಂಡರಬಾಳು, ನಾಗವಳ್ಳಿ, ಕಾಗಲವಾಡಿ ಕೆರೆಗಳು ಈ ಯೋಜನೆಯ ಲಾಭ ಪಡೆಯಲಿವೆ.
ಕಾಮಗಾರಿ ಪರಿಶೀಲನೆ ವೇಳೆ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ನಿರಂಜನ್ ಕುಮಾರ್, ಎನ್.ಮಹೇಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.

promotions

Read More Articles