ವಾರದ ಸಂತೆ ಪುನಃ ಪ್ರಾರಂಭಿಸಬೇಕು; ವ್ಯಾಪಾರಸ್ಥರ ಆಗ್ರಹ
- 15 Jan 2024 , 12:35 AM
- Belagavi
- 241
ಹುಕ್ಕೇರಿ : ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯನ್ನು ಪುನಃ ಪ್ರಾರಂಭಿಸಬೇಕೆಂದು ಗ್ರಾಮದ ವ್ಯಾಪಾರಸ್ಥರೆಲ್ಲರೂ ಸೇರಿ ಇಂದು ಗ್ರಾ.ಪಂ. ಪಿಡಿಓ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಪ್ರತಿ ಮಂಗಳವಾರ ಪಾಶ್ಚಾಪೂರ ಗ್ರಾಮದಲ್ಲಿ ಸಂತೆ ನಡೆಯುತ್ತಿತ್ತು. ಆದರೆ ಮಹಾಮಾರಿ ಕೊರೋನಾ ಹಾವಳಿಯಿಂದಾಗಿ ಸಂತೆಯನ್ನು ರದ್ದುಮಾಡಿ ಆರು ತಿಂಗಳುಗಳು ಕಳೆದಿವೆ. ಇನ್ನೂವರೆಗೆ ವಾರದ ಸಂತೆ ಪ್ರಾರಂಭ ಮಾಡಲಿಕ್ಕೆ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ಇದರಿಂದಾಗಿ ಪಾಶ್ಚಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ವ್ಯಾಪಾರಸ್ಥರಿಗೂ ಬಹಳ ತೊಂದರೆಗಳು ಉಂಟಾಗಿರುತ್ತವೆ.

ಈಗಾಗಲೇ ಬೈಲಹೊಂಗಲ, ಗೋಕಾಕ, ಹುಕ್ಕೇರಿ, ಸಂಕೇಶ್ವರ, ಘಟಪ್ರಭಾ ಪಟ್ಟಣಗಳ ಸಂತೆಗಳನ್ನು ಪುನಃ ಆರಂಭಿಸಲಾಗಿದ್ದು, ಅದರಂತೆ ಪಾಶ್ಚಾಪೂರ ಗ್ರಾಮದ ಸಂತೆಯನ್ನು ಆರಂಭಿಸಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಮತ್ತು ಹುಕ್ಕೇರಿ ತಹಶೀಲ್ದಾರರಿಗೂ ಕೂಡ ಮನವಿ ಸಲ್ಲಿಸಿ ವಿನಂತಿಸಿಕೊಂಡಿದ್ದಾರೆ. ಆದರೆ ಇನ್ನೂವರೆಗೆ ಸಂತೆಯನ್ನು ಆರಂಭಿಸಿಲ್ಲ ಎಂದು ವ್ಯಾಪಾರಸ್ಥರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದ ಪಾಶ್ಚಾಪೂರ ಗ್ರಾ.ಪಂ. ಪಿಡಿಓ ವಾಸುದೇವ ಅವರು ಮಾತನಾಡಿ ಬರುವ ಗುರವಾರ 27 ರಂದು ಸರ್ವ ವ್ಯಾಪಾರಿಗಳ ಸಭೆಯನ್ನು ಕರೆದು ಈ ಬಗ್ಗೆ ನಿರ್ಣಯವನ್ನು ತಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವ್ಯಾಪಾರಸ್ಥರಾದ ಜಾಕೀರ ನಧಾಪ, ಮಹಾಂತೇಶ ಉದೋಶಿ, ಅಜ್ಜಪ್ಪ ಅಂಬಿಗೇರ, ಅಲ್ತಾಪ ನಧಾಫ, ಶಂಕರ ಕಂಕಣವಾಡಿ, ಜಾಕೀರ ನಾಯಿಕ, ಮಕ್ತುಮಸಾಬ ದೇಸಾಯಿ, ಅತೀಕ್ಮೌಲಾನಾ, ಇನಾಯತ ಬೇಪಾರಿ, ಜಾನೂಲ್ ಬೇಪಾರಿ, ಸಲೀಂ ಮೊಘಲ, ಇಮ್ರಾನ ಅತ್ತಾರ, ಸುರೇಶ ಮಡಿವಾಳ, ಸುನೀಲ ಕಲಾಲ, ಅಜೀತ ಗಾಳಿ, ಅಶೋಕ ಶೆಟ್ಟಿ, ಅಶ್ಪಾಕ ದರ್ಗಾ, ಶಾನನವಾಜ್ ನಧಾಫ, ಹಾಗೂ ಗ್ರಾಮದ ಸಮಸ್ತ ವ್ಯಾಪಾರಸ್ಥರು ಉಪಸ್ಥಿತರಿದ್ದರು.










