ದೆಹಲಿಯತ್ತ ಅಂಗಡಿ ಕುಟುಂಬದವರ ಪ್ರಯಾಣ: ಇತ್ತ ವೃದ್ಧ ತಾಯಿಯ ದುಃಖ ಮುಗಿಲುಮುಟ್ಟಿದೆ

ಬೆಳಗಾವಿ : ಕೇಂದ್ರ ಸಚಿವ ಸುರೇಶ ಅಂಗಡಿ ನಿನ್ನೆ ಸಂಜೆ ವಿಧಿವಶವಾಗಿದ್ದಾರೆ. ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಹಿರಿಯ ಪುತ್ರಿ ಮೊಮ್ಮಗಳು ಸೇರಿ 9 ಜನ ಕುಟುಂಬ ಸದಸ್ಯರು ಇಂದು ಬೆಳಿಗ್ಗೆ ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ.

promotions

ಇತ್ತ ಸುರೇಶ ಅಂಗಡಿ ಅವರ ವೃದ್ಧ ತಾಯಿಯ ದುಃಖ ಮುಗಿಲುಮುಟ್ಟಿದೆ. ಇನ್ನೊಂದು ಕಡೆ ವಯಸ್ಸಾದ ತಾಯಿಯನ್ನು ದೆಹಲಿಗೆ ಕರೆದುಕೊಂಡು ಹೋಗಲಾಗುತ್ತಿಲ್ಲ, ಕೊನೆಯ ಗಳಿಗೆಯಲ್ಲಿ ಮಗನ ಮುಖವನ್ನು ನೋಡಲು ಸಹ ಆಗುತ್ತಿಲ್ಲವಲ್ಲ ಎಂದು ಅವರು ನೋವನ್ನು ತೋಡಿಕೊಂಡಿದ್ದಾರೆ.

promotions

ತಂದೆ ತಾಯಿಯ ಮುಂದೆ ಮಕ್ಕಳನ್ನು ಕಳೆದುಕೊಂಡಾಗ ಆ ಹೆತ್ತ ಕರುಳಿನ ನೋವನ್ನು ಹೇಳತೀರದು. ಮಗನನ್ನು ಕಳೆದುಕೊಂಡ ವೃದ್ಧ ತಾಯಿ ಸೋಮವ್ವಾ ಬಿಕ್ಕಿಬಿಕ್ಕಿ ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಅವರ ಪತ್ನಿ ಮಂಗಲ, ಪುತ್ರಿ ಶೃದ್ಧಾ ಹಾಗೂ ಅಳಿಯಂದಿರು ಅಲ್ಲೇ ಇದ್ದಾರೆ.

ಇನ್ನುಳಿದ ಕುಟುಂಬದ ಸದಸ್ಯರಾದ ಹಿರಿಯ ಪುತ್ರಿ ಡಾ.ಸ್ಫೂರ್ತಿ ಪಾಟೀಲ, ಮೊಮ್ಮಗಳು ರಿದ್ಧಶಾ ಹಾಗೂ ಅವರ ಅಂತ್ಯ ಸಂಸ್ಕಾರ ನೆರವೇರಿಸಲಿರುವ ಬಾಳಯ್ಯ ಹಿರೇಮಠ ಮತ್ತು ಆಪ್ತ ಸಹಾಯಕರಾದ ಶ್ರೀಕಾಂತ ಕಟಕೋಳ, ರಂಗನಾಥ ದೇಶಪಾಂಡೆ, ರಾಜು ಜ್ಯೋಶಿ, ಸಂತೋಷ ತುಬಚಿ ಸೇರಿದಂತೆ ಕೆಲವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೇಳಸಿದ್ದಾರೆ.

ಮಧ್ಯಾಹ್ನ 1 ಗಂಟೆಗವರೆಗೆ ತಲುಪುತ್ತಾರೆ. ನಂತರ ಸಂಜೆ 4 ಗಂಟೆಗೆ ಲಿಂಗಾಯತ ಧರ್ಮದ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ.

Read More Articles