ಸೋಮವಾರ ದಿ.5 ರಂದು ರಾಣಿ ಚನ್ನಮ್ಮ ವಿವಿಯ 8ನೇ ಘಟಿಕೋತ್ಸವ, ಕುಲಪತಿ ಎಮ್. ರಾಮಚಂದ್ರಗೌಡ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವವನ್ನು ಇದೆ ಸೋಮವಾರ ದಿ.5 ರಂದು ಸುವರ್ಣಸೌಧದಲ್ಲಿ ಏರ್ಪಡಿಸಲಾಗಿದೆ ಎಂದು ರಾಣಿ ಚನ್ನಮ್ಮ ವಿವಿಯ ಕುಲಪತಿ ಪ್ರೊ. ಎಮ್. ರಾಮಚಂದ್ರಗೌಡ ಹೇಳಿದರು.

promotions

ನಗರದ ವಾರ್ತಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ವಿಜೃಂಭಣೆಯಿಂದ ನಡೆಯುವ ಘಟಿಕೋತ್ಸವ ಈ ವರ್ಷ ಕೊರೋನಾ ಹಿನ್ನೆಲೆಯಿಂದ ಸರಳವಾಗಿ ಸುವರ್ಣವಿಧಾನಸೌಧದ ನೆಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ನಡೆಸಲಾಗುತ್ತಿದೆ.

promotions

ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ರಾಜ್ಯದ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಜುಭಾಯಿವಾಲಾ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಸಹ- ಕುಲಾಧಿಪತಿಗಳಾದ ಅಶ್ವಥ್ ನಾರಾಯಣ ಅಥಿತಿಗಳಾಗಿ ಆಗಮಿಸಲಿದ್ದು, ಬೆಂಗಳೂರಿನ ನ್ಯಾಕ್ ನಿರ್ದೇಶಕರಾದ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಸದರಿ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆಸಲ್ಲಿಸಿದ ಗೋವಿಂದರಾಜ್, ಪದ್ಮಶ್ರೀ ಪುರಸ್ಕೃತ ಮೋಹನದಾಸ ಪೈ ಹಾಗೂ ಶ್ರೀಮನ್ ಮಹಾರಾಜ್ ನಿರಂಜನ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗುವುದು.

ಹಾಗೂ ಸ್ನಾತಕ ತರಗತಿಗಳಿಗೆ 11 ಸುವರ್ಣ ಪದಕಗಳು, ಸ್ನಾತಕೋತ್ತರ ತರಗತಿಗಳಿಗೆ 22 ಸುವರ್ಣ ಪದಕಗಳು, 4 ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಾಯೋಜಿತ ಸುವರ್ಣ ಪದಕಗಳು ಹಾಗೂ 79 ಪಿ.ಎಚ್.ಡಿ ಪದವಿಗಳನ್ನು ಮುಖ್ಯ ವೇದಿಕೆಯಲ್ಲಿ ನೀಡಲಾಗುವುದು ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಿಂದ ಘಟಿಕೋತ್ಸವ ನಡೆಯುವ ಸಭಾಂಗಣದೊಳಗೆ ಕೇವಲ 100 ಜನರಿಗೆ ಮಾತ್ರ ಕುಲಾಧಿಪತಿಗಳ ಹಸ್ತದಿಂದ ಪದವಿ ಪತ್ರಗಳನ್ನು ಪ್ರದಾನ ಮಾಡಲಾಗುವುದು.

ಉಳಿದವುಗಳನ್ನು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಲ್ಲಿ ನೀಡಲಾಗುವುದು ಎಂದು ಕುಲಪತಿ ಪ್ರೊ.ರಾಮಚಂದ್ರಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ.ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read More Articles