ಬೆಳಗಾವಿ: ರಾಜ್ಯದಲ್ಲಿ ನೆರೆಯ ರಾಜ್ಯಗಳಿಂದ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಒಂದು ಕಡೆ ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ದಿನೇ ದಿನೇ ಏರುತ್ತಲಿದೆ. ಆದ ಕಾರಣ ತಕ್ಷಣಕ್ಕೆ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶವಿಲ್ಲ. ಜೂನ್ 8 ರಿಂದ ರಾಜ್ಯದಲ್ಲಿ ಎಲ್ಲ ದೇವಾಲಯಗಳು, ಮಸೀದಿ, ಚರ್ಚಗಳು ಓಪನ್ ಆಗುತ್ತೆ ಎಂಬ ಭರವಸೆಯಲ್ಲಿ ಭಕ್ತರಿದ್ದರು, ಆದರೆ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ದೇಗುಲಗಳಾದ ಸವದತ್ತಿ ಯಲ್ಲಮ್ಮ, ಚಿಂಚಲಿಯ ಮಾಯಕ್ಕ ದೇವಸ್ಥಾನಗಳು ಜೂನ್ 30 ರವರೆಗೆ ಓಪನ್ ಆಗುವುದಿಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗಿವೆ. ಮುಂಜಾಗೃತಾ ಕ್ರಮವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಮುಖ ದೇವಸ್ಥಾನಗಳನ್ನು ಜೂನ್ 30 ರವರೆಗೆ ಬಂದ್ ಇಡುವಂತೆ ಆದೇಶ ಹೊರಡಿಸಿದ್ದು. ಜೂನ್ 30 ರ ನಂತರ ದೇವಿ ದರ್ಶನದ ಬಗ್ಗೆ ಮಾಹಿತಿ ನೀಡಲಾಗುವುದು. ಎಂದು ದೇವಸ್ಥಾನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.