ಖ್ಯಾತ ಪತ್ರಕರ್ತ ರವಿ ಬೆಳಗೆರೆ ವಿಧಿವಶ
- 14 Jan 2024 , 10:52 PM
- Bengaluru
- 246
ಬೆಂಗಳೂರು: ಪತ್ರಿಕಾರಂಗದಲ್ಲಿ ಒಂದು ಅಲೆಯನ್ನು ಮೂಡಿಸಿದ್ದ ಖ್ಯಾತ ಪತ್ರಕರ್ತ, ಬರವಣಿಗೆಯ ಮೂಲಕ ಎಲ್ಲರನ್ನೂ ಸೆಳೆದ ಉತ್ತಮ ಬರಹಗಾರ ರವಿ ಬೆಳಗೆರೆ (62) ವಿಧಿವರಾಗಿದ್ದಾರೆ. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕರ್ನಾಟಕದ ಅನೇಕ ಪತ್ರಕರ್ತರು ಅವರ ಗರಡಿಯಲ್ಲಿ ಪಳಗಿದವರ ಗಿದ್ದಾರೆ. ಮಾರ್ಚ್ 15 , 1958 ರಂದು ಬಳ್ಳಾರಿಯಲ್ಲಿ ಜನನಿಸಿದ ಬೆಳಗೆರೆ ಶಿಕ್ಷಣವನ್ನ ಬಳ್ಳಾರಿಯಲ್ಲಿ ಮುಗಿಸಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯಿಂದ ಕಾರ್ಯ ಪ್ರಾರಂಭಿಸಿದ ಅವರು ಹಲವು ಪತ್ರಿಕಾರಂಗದ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. 1995 ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಪ್ರಾರಂಭ ಮಾಡುತ್ತಾರೆ. ಕ್ರೈಂ ಡೈರಿ ಕಾರ್ಯಕಮದ ನಿರೂಪಕರಾಗಿದ್ದ ರವಿ ಬೆಳಗೆರೆ ದೊಡ್ಡ ಹೆಸರು ಸಂಪಾದಿಸಿದ್ದರು.

ಅಪರಾಧ ಜಗತ್ತಿನ ಬಗ್ಗೆ ಲೆಕ್ಕವಿಲ್ಲದಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಿ ಜನರ ಮನ್ನಣೆ ಗಳಿಸಿದ್ದರು. ಸರ್ಪ ಸಂಬಂಧ ಭೀಮಾತೀರದ ಹಂತಕರು , ನೀ ಹಿಂಗ ನೋಡಬೇಡ ನನ್ನ , ಡಿ ಕಂಪನಿ , ರಾಜ್ ಲೀಲಾ ವಿನೋದ ಸೇರಿದಂತೆ ಹಲವು ಕೃತಿಗಳು ಬೆಳಗೆರೆ ಕೊಡುಗೆ. ಜೊತೆಗೆ ಪಾರ್ಥನಾ ಸ್ಕೂಲ್ ಮೂಲಕ ಅನೇಕರಿಗೆ ಉಚಿತ ಶಿಕ್ಷಣವನ್ನು ನೀಡಿದ ಕೀರ್ತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ. ಯುವ ಮನಸುಗಳಿಗಾಗಿ ಓ ಮನಸೆ ಪಾಕ್ಷಿಕ ಸಹ ಜನಮನ್ನಣೆಗೆ ಪಾತ್ರವಾಗಿತ್ತು .
ಕರ್ಮವೀರ , ಕಸ್ತೂರಿ , ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ರವಿಬೆಳಗೆರೆ ಭಾವನ ಆಡಿಯೋ, ಭಾವನ ಪ್ರಕಾಶನ , ಪ್ರರ್ಥಾನ ಶಾಲೆಯ ಸಂಸ್ಥಾಪಕರು. ಕಿರುತೆರೆಯಲ್ಲಿಯೂ ಬೆಳಗೆರೆ ಕಾಣಿಸಿಕೊಂಡಿದ್ದು ಅವರ ನಿರೂಪಣೆ ಮೆಚ್ಚುಗೆಗೆ ಪಾತ್ರವಾಗಿತ್ತು ಬಿಗ್ ಬಾಸ್ ನ ಕೊನೆಯ ಸೀಸನ್ ನಲ್ಲಿಯೂ ಬೆಳಗೆರೆ ಭಾಗವಹಿಸಿದ್ದರು. ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಅವರು ಸ್ಥಾಪಿಸಿರುವ ಬೆಂಗಳೂರಿನ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.










