ಬೆಳಗಾವಿಯಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ
- 11 Jan 2024 , 9:03 PM
- Belagavi
- 238
ಬೆಳಗಾವಿ:12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು ಕೆ.ಎಂ.ಎಫ್. ವತಿಯಿಂದ ರಾಜ್ಯದ ಎಲ್ಲ 12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನೇತೃತ್ವದಲ್ಲಿ ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆವರಣದಲ್ಲಿ ಬುಧವಾರ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ' ಕೆಎಂಎಫ್ ಪ್ರಸ್ತುತ ವಾರ್ಷಿಕ 15 ಸಾವಿರ ಕೋಟಿ ವಹಿವಾಟು ಹೊಂದಿದ್ದು , ಇದನ್ನು 4 ವರ್ಷಗಳಲ್ಲಿ 25 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇದೆ. ಕೆಎಂಎಫ್ ಹಾಗೂ 14 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಮೂಲಕ ವರ್ಷದಲ್ಲಿ ಸಾವಿರ ಮಂದಿಗೆ ನೌಕರಿ ನೀಡಲಾಗುವುದು ' ಎಂದು ಹೇಳಿದರು. ಈಗಾಗಲೇ ಹೊಸ ಹೊಸ ಪ್ರೊಡಕ್ಟ್ ಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೇವೆ. ಈಗ ಶಾಂಪಲ್ ಗಾಗಿ ಚಾಕಲೇಟ್ ನಂದಿನಿ ಬ್ರೆಡ್ ಕೊಡ್ತಾ ಇದ್ದೇವೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಲಿ. ಕೆಎಂಎಫ್ ಎಂದರೆ ಹಾಲು ಮಾರೋರು, ಖರೀದಿಸೋರು ಎಂದಷ್ಟೇ ಭಾವನೆ ಹಿಂದೆ ಇತ್ತು.

ಈಗ ಅದು ಬದಲಾಗಿದೆ,ಬಹಳಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಗುಜರಾತ್ನ ' ಅಮೂಲ್ ' ಹಾಗೂ ಕರ್ನಾಟಕದ ಕೆಎಂಎಫ್ ದೇಶದಲ್ಲಿ ಗಟ್ಟಿಯಾಗಿ ನಿಂತಿದೆ. ರೈತರನ್ನು ಮತ್ತಷ್ಟು ಆಕರ್ಷಿಸಿ ಸಹಕಾರ ಕ್ಷೇತ್ರದ ಕಡೆಗೆ ಕರೆದುಕೊಂಡು ಬರುತ್ತೇವೆ. ನಾನು ಅಧ್ಯಕ್ಷನಾಗುವುದಕ್ಕಿಂತ ಮುಂಚೆ, ನಿತ್ಯ 83 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ 89 ಲಕ್ಷ ಲೀಟರ್ಗೆ ಏರಿದೆ. ಇಷ್ಟು ಪ್ರಮಾಣದ ಸಂಗ್ರಹ ಹೊಸ ದಾಖಲೆಯೇ ಸರಿ. ಇದನ್ನು ಕೋಟಿಗೆ ಹೆಚ್ಚಿಸುವ ಗುರಿ ಇದೆ ' ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಪ್ರಸಕ್ತ ಸಾಲಿನಲ್ಲಿ ಎಲ್ಲ ಡಿಸಿಸಿ ಬ್ಯಾಂಕ್ಗಳ ಮೂಲಕ ರೈತರಿಗೆ 15,300 ಕೋಟಿ ಸಾಲ ವಿತರಿಸಲು ನಿರ್ಧರಿಸಲಾಗಿದೆ ' ಎಂದು ತಿಳಿಸಿದರು.

ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಮಾತನಾಡಿ, ' ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹೈನುಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ವಾರ್ ರೂಂ ಸ್ಥಾಪಿಸಲಾಗುತ್ತಿದೆ. ಅದು 24x7 ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿಯೇ ತೀರುತ್ತೇವೆ ' ಎಂದು ತಿಳಿಸಿದರು ' ಕ್ಷೀರ ಸಂಜೀವಿನಿ ' ಯೋಜನೆ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಶಿಕಲಾ ಜೊಲ್ಲೆ , ' ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ವಸ್ತುಗಳನ್ನು ಸರ್ಕಾರದ ಮೂಲಕ ಮಾರುವ ಯೋಜನೆ ಸಿದ್ಧವಾಗುತ್ತಿದೆ ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಬಿ.ಆರ್ . ಪಾಟೀಲ ಅವರಿಗೆ ' ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಜಿಲ್ಲೆಯ 17 ಸಾಧಕ ಹೈನುಗಾರರನ್ನು ಸತ್ಕರಿಸಲಾಯಿತು. ಕೆ.ಎಂ.ಎಫ್. ಬ್ರ್ಯಾಂಡಿನ ನಂದಿನಿ ಚಾಕೊಲೇಟ್, ಬಾದಾಮ ಹಲ್ವಾ, ಐದು ಬಗೆಯ ಬ್ರೆಡ್, ಐಸ್ ಕ್ರೀಂ ಮತ್ತಿತರ ಹೊಸ ಉತ್ಪನ್ನಗಳನ್ನು ಗಣ್ಯರು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.










