ಶ್ರೀ ಮನ್ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಬಗ್ಗೆ ತಿಳಿಯಲೇ ಬೇಕಾದ ವಿಷಯಗಳು

ಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ (೧೯೨೪–೧೯೪0)

promotions

ಜೀವನ :
ಮೈಸೂರು ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ಅವರು ಸಾಹಿತ್ಯ ಪೋಷಕರೂ, ಕಲಾರಕ್ಷಕರೂ ಆಗಿದ್ದರು. ಇವರ ದ್ವಿತೀಯ ಪುತ್ರರೇ ಕಂಠೀರವ ನರಸಿಂಹರಾಜ ಒಡೆಯರ್, ಇವರು ೫-೭-೧೯೮೮ರಲ್ಲಿ ಜನಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ಅಣ್ಣಂದಿರು, ಮೈಸೂರಿನಲ್ಲಿ ವ್ಯಾಸಂಗ ಮಾಡಿದ ನಂತರ ಉನ್ನತವ್ಯಾಸಂಗಕ್ಕಾಗಿ ಅಜ್ಮೀರಿನ ಮೇಯೋ ರಾಜಕುಮಾರ್ ಕಾಲೇಜನ್ನು ಸೇರಿದರು. ವಿದ್ಯಾಭ್ಯಾಸ ಮುಗಿದ ನಂತರ ೧೯0೨ರಲ್ಲಿ ಯುವರಾಜಪಟ್ಟವನ್ನು ಅಲಂಕರಿಸಿದರು. ಆಡಳಿತಪಟುಗಳಾದ ಇವರು ಸೆರೆಮನೆ ವಿಭಾಗ, ನೈರ್ಮಲ್ಯ ವಿಭಾಗ, ವೈದ್ಯಕೀಯ ಶಾಖೆ, ಪೊಲೀಸು ದಳ, ಸೇನಾಖಾತೆಗಳ ಆಡಳಿತ ನಿರ್ವಹಣೆ ಮಾಡುತ್ತಿದ್ದರು. ಸ್ಕೌಟ್ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದರು. ಹಲವಾರು ಹರಿಜನ ವಿದ್ಯಾರ್ಥಿನಿಲಯಗಳ ಸ್ಥಾಪಕರಾದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಪೋಷಕರಾಗಿದ್ದು ಅಧ್ಯಕ್ಷಸ್ಥಾನವನ್ನು ೧೯೨೪ ರಿಂದ ೧೯೪0 ರವರೆಗೆ ಅಲಂಕರಿಸಿದ್ದರು.

promotions

ವಿವಾಹ ಜೀವನ : ಕಂಠೀರವ ನರಸಿಂಹರಾಜ ಒಡೆಯರ್ ಅವರ ವಿವಾಹವು ೧೯೧೦ರಲ್ಲಿ ಸರದಾರ್ ದಳವಾಯಿ ದೇವರಾಜೇ ಅರಸರ ನಾಲ್ಕನೆಯ ಮಗಳು ಕೆಂಪು ಚೆಲುವಾಜಮ್ಮಣ್ಣಿಯೊಂದಿಗೆ ನಡೆಯಿತು.ಕೃಷ್ಣರಾಜ ಒಡೆಯರ ಅನಂತರ ಮೈಸೂರು ಸಂಸ್ಥಾನದ ರಾಜರಾದ ಜಯಚಾಮರಾಜ ಒಡೆಯರ್ ಇವರ ಪುತ್ರ (ಜನನ ೧೯೧೮ರ ಜುಲೈ ೧೮).

ಸಾಧನೆ : ವಿದ್ವಾಂಸರು, ಪತ್ರಿಕಾಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ.ವಿ. ಗುಂಡಪ್ಪನವರು ೧೯೩೩ರಲ್ಲಿ  ಪರಿಷತ್ತಿಗೆ ಅಧ್ಯಕ್ಷರಾಗಿ ಬಂದ ಮೇಲೇ ಪರಿಷತ್ತಿಗೆ ನವದೆಸೆ ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷ್ಮನಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ ಭಾಷಣ, ಕಾವ್ಯವಾಚನ ಇತ್ಯಾದಿ ನಡೆಯತೊಡಗಿತು.

ಪರಿಷತ್ತು ಜನಪ್ರಿಯವಾಗಲು ಹೆಚ್ಚು ಹೆಚ್ಚು ಜನರು ಸದಸ್ಯರಾಗಬೇಕು ಎಂಬುದು ಡಿವಿಜಿ ಅವರ ಆಶಯವಾಗಿತ್ತು. ಅದಕ್ಕಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಿದರು.

ಸಂಸ್ಥೆಯ ನಿಬಂಧನೆ ಎಂಬುದು ಸಂಸ್ಥೆಗೆ ದಿಕ್ಸೂಚಿ – ಅಂಕುಶವಿದ್ದಂತೆ. ಅದು ಸಕಾಲಿಕವಾಗಿರಬೇಕು, ಸಮರ್ಪಕವಾಗಿರಬೇಕು, ಮತ್ತು ಸಮಗ್ರವಾಗಿರಬೇಕು ಎಂದು ಅದುವರೆಗೆ ಹಲವಾರು ವಾರ್ಷಿಕಾಧಿವೇಶನಗಳಲ್ಲ್ಲಿ ಆಗಿದ್ದ ನಿಬಂಧನೆಯ ತಿದ್ದುಪಡಿಗಳನ್ನೆಲ್ಲ ಸೇರ್ಪಡೆ ಮಾಡಿ ಒಂದೂಗೂಡಿಸಿ ನಿಬಂಧನಾವಳಿಯನ್ನು ಪ್ರಕಟಿಸಿದರು.

ಕನ್ನಡ ಕಾವ್ಯಗಳು ಜನರಲ್ಲಿ ಪ್ರಚಾರವಾಗಬೇಕಾದರೆ ಗಮಕ ಕಲೆಯೊಂದೇ ದಾರಿ. ಗಮಕವಾಚನದಿಂದಲೇ ಹಳಗನ್ನಡ ನಡುಗನ್ನಡ ಕಾವ್ಯಗಳು ಜನಕ್ಕೆ ತಲುಪಲು ಸಾಧ್ಯ. ಗ್ರಂಥಗಳ ಮೂಲಕ ಜನಸಾಮಾನ್ಯರಿಗೆ ಕಾವ್ಯ ತಲುಪುವುದಿಲ್ಲ. ಕಾವ್ಯ ದೊರೆತರೂ ಜನಸಾಮಾನ್ಯರೂ ಅರ್ಥೈಸಿಕೊಳ್ಳಲಾರರು, ಆನಂದಿಸಲಾರರು. ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮದಿಂದ ಅದು ಸಾಧ್ಯ ಎಂದು ನಂಬಿದ್ದರು. ಡಿ.ವಿ.ಜಿ. ಅದಕ್ಕಾಗಿ ಪರಿಷತ್ತಿನಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿದರು. ಗಮಕಿಗಳು ತಯಾರಾಗತೊಡಗಿದರು. ಈ ತರಗತಿಗಳಿಂದ ಉತ್ತೀರ್ಣರಾಗಿ ಬಂದವರಲ್ಲಿ ನಾಡಿನ ಪ್ರಸಿದ್ದ ಗಮಕ ಕಲಾವಿರಾದ ಶಕುಂತಲಾ ಬಾಯಿ, ಬಿಂದೂರಾವ್ ಅವರೂ ಸೇರಿದ್ದಾರೆ.  ಅನೇಕ ಪ್ರಖ್ಯಾತ ಗಮಕಿಗಳು ಬಿಂದೂರಾಯರ ಶಿಷ್ಯರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಪರವಾಗಿ ಪರಿಷತ್ತಿನ ಕಾರ್ಯಗಳನ್ನು ನಿರ್ವಹಿಸಿದವರು ೨ನೇ ಉಪಾಧ್ಯಕ್ಷರಾದ ಡಿ. ವಿ. ಗುಂಡಪ್ಪನವರು. ೧೯೩೩ರಲ್ಲಿ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿವಿಜಿ ಅವರು ಆಯ್ಕೆಗೊಂಡರು.

ಕಚೇರಿ ವ್ಯವಸ್ಥೆ: ಪರಿಷತ್ತಿನ ಕಾರ್ಯಾಲಯವನ್ನು ಪುನರ್‍ಘಟಿಸಿ ವ್ಯವಸ್ಥಿತಗೊಳಿಸಿದರು. ಸಮಯ ಪಾಲನೆ, ವೇಷಭೂಷಣಗಳಲ್ಲಿ ಶಿಸ್ತನ್ನು ತಂದರು. ಒಮ್ಮೆ ಪರಿಷತ್ತಿನ ಸಿಬ್ಬಂದಿಯಲ್ಲಿದ್ದ ಪ್ರಸಿದ್ಧ ನಾಟಕಕಾರ ಕೈವಾರ ರಾಜಾರಾವ್ ಕಚ್ಚೆಪಂಚೆ ಉಡದೆ ದಟ್ಟಿಪಂಚೆಯನ್ನು ಉಟ್ಟು ಬಂದಾಗ, ಅವರನ್ನು ಒಳಕೋಣೆಗೆ ಕರೆದು ಕಚ್ಚೆ ಹಾಕಿಸಿ ಕಳಿಸಿದ್ದರು. ಕಚೇರಿಯಲ್ಲಿ ಕೆಲಸ ಮಾಡುವವರು ವೇಷಭೂಷಣಗಳ ಕಡೆ ನಿಗಾ ಕೊಡಬೇಕು ಎಂದರು.
ನಾಲ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ರಾಜಸೂತ್ರ ವಹಿಸಿದಾಗ (೧೯೦೨) ಇವರು ಯುವರಾಜ ಪದವಿಯನ್ನಲಂಕರಿಸಿದರು. ೧೯೦೮-೦೯ರಲ್ಲಿ ಜಪಾನ್ ದೇಶಕ್ಕೆ ಭೇಟಿಯಿತ್ತು ಆ ದೇಶದ ತಾಂತ್ರಿಕ ಮುನ್ನಡೆಯನ್ನು ಸಂದರ್ಶಿಸಿ ಹಿಂತಿರುಗಿದರು. ೧೯೧೧ರಲ್ಲಿ ಇವರು ದೆಹಲಿಯಲ್ಲಿ ನಡೆದ ಬ್ರಿಟಿಷ್ ದೊರೆ ಐದನೇ ಜಾರ್ಜ್ ಅವರ ದರ್ಬಾರಿಗೆ ಅಣ್ಣನೊಡನೆ ಹೋಗಿದ್ದರು.[೧] ಬ್ರಿಟಿಷ್ ದೊರೆಯಿಂದ ಇವರಿಗೆ ನೈಟ್ ಕಮಾಂಡರ್ ಪ್ರಶಸ್ತಿ ದೊರಕಿತ್ತು. ೧೯೧೩ರಲ್ಲಿ ಐರೋಪ್ಯ ಪ್ರವಾಸ ಕೈಗೊಂಡು ಇಂಗ್ಲೆಂಡ್, ಫ್ರಾನ್ಸ್‌, ಸ್ವಿಟ್ಸರ್ಲೆಂಡ್ ಮತ್ತು ಬೆಲ್ಜಿಯಂ ರಾಷ್ಟ್ರಗಳನ್ನು ಸಂದರ್ಶಿಸಿದರು. ಪ್ರವಾಸದಿಂದ ಹಿಂತಿರುಗಿದ ಅನಂತರ ಇವರಿಗೆ ಮಹಾರಾಜರ ಸಚಿವ ಮಂಡಲಿಯ ವಿಶೇಷ ಸದಸ್ಯತ್ವ ದೊರಕಿತು. ಸೇನಾ ಖಾತೆಯನ್ನು ಇವರಿಗೆ ವಹಿಸಲಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸೈನ್ಯ ಸರಬರಾಜಿನ ಕಾರ್ಯವನ್ನು ಯಶಸ್ವಿಯಾಗಿ ಇವರು ನೆರವೇರಿಸಿದರು. ೧೯೧೫ರಲ್ಲಿ ಬ್ರಿಟಿಷ್ ಸರ್ಕಾರದಿಂದ ಇವರಿಗೆ ಜಿ.ಸಿ.ಐ.ಇ. ಬಿರುದೂ ೧೯೧೮ರಲ್ಲಿ ಹಿಸ್ ಹೈನೆಸ್ ಪ್ರಶಸ್ತಿಯೂ ಲಭ್ಯವಾದುವು.

ಕಾರ್ಯ ಚಟುವಟಿಕೆಗಳು:
ಕಂಠೀರವ ನರಸಿಂಹರಾಜ ಒಡೆಯರಿಗೆ ಸಂಸ್ಥಾನದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿತ್ತು. ಇವರು ಸಂಸ್ಥಾನದ ಸ್ಕೌಟ್ ಚಳವಳಿಯ ಮುಖ್ಯರಾಗಿದ್ದುದಲ್ಲದೆ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಾಗಿದ್ದರು. ಗರ್ಭಿಣಿ ಮತ್ತು ಶಿಶು ಸಂರಕ್ಷಣ ಕಾರ್ಯದಲ್ಲಿ ವಿಶೇಷ ಆಸ್ಥೆ ವಹಿಸಿದ್ದು ಈ ಕ್ಷೇತ್ರದಲ್ಲಿ ಅನೇಕ ಚಿಕಿತ್ಸಾಲಯಗಳ ಸ್ಥಾಪನೆಗೆ ಕಾರಣರಾದರು. ಕಿವುಡ ಮತ್ತು ಕುರುಡರ ಶಿಕ್ಷಣಕ್ಕೆ ಇದರಿಂದ ವಿಶೇಷ ಪ್ರೋತ್ಸಾಹ ಲಭಿಸಿತು. ಸಂರಕ್ಷಣ ಕಾರ್ಯದಲ್ಲಿ ವಿಶೇಷ ಪ್ರೋತ್ಸಾಹ ಲಭಿಸಿತು. ದೀನದಲಿತರಲ್ಲಿ ಇವರು ತೋರಿಸುತ್ತಿದ್ದ ಔದಾರ್ಯ ವಿಶೇಷ. ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಹಲವು ಕಡೆಗಳಲ್ಲಿ ಸ್ಥಾಪಿತವಾದ ಹರಿಜನ ವಿದ್ಯಾರ್ಥಿ ನಿಲಯಗಳಿಗೆ ಇವರಹೆಸರನ್ನಿಡಲಾಗಿದೆ. ಸಂಗೀತ ಮತ್ತು ಸಾಹಿತ್ಯದಲ್ಲಿ ಇವರಿಗೆ ಹೆಚ್ಚಿನ ಅಭಿರುಚಿಯಿತ್ತು. ಕಂಠೀರವ ನರಸಿಂಹರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ-ಅಧ್ಯಕ್ಷರೂ ಮಿಥಿಕ್ ಸೊಸೈಟಿಯ ಮುಖ್ಯ ಉಪಪೋಷಕರೂ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.-ಛಾನ್ಸೆಲರೂ ಆಗಿದ್ದರು. ಕಂಠೀರವ ನರಸಿಂಹರಾಜ ನಾಮಾಂಕಿತ ಕಟ್ಟಡಗಳೂ ರಸ್ತೆಗಳೂ ಬಡಾವಣೆಗಳೂ ಗ್ರಾಮಗಳೂ ಹಳೆಯ ಮೈಸೂರಿನಲ್ಲಿವೆ.
ಇವರು 1940ರ ಮಾರ್ಚ್ 11ರಂದು ಮುಂಬೈಯಲ್ಲಿ ನಿಧನ ಹೊಂದಿದರು.

Read More Articles