
ಕಥೆ ಸೃಷ್ಟಿಸಿ ಕೋಟಿಗಟ್ಟಲೆ ವಂಚನೆ:ಖಿಲಾಡಿ ಲೇಡಿ ಅಂದರ
ಬೆಂಗಳೂರು: ಇಷ್ಟು ದಿನ ಸಾಕಷ್ಟು ವಂಚನೆ ಪ್ರಕರಣದಲ್ಲಿ ಐಶ್ವರ್ಯ ಗೌಡ, ಶ್ವೇತಾ ಗೌಡ ಹೆಸರು ಕೇಳಿ ಬಂದಿರುವ ಪ್ರಕರಣ ಮಾಸುವ ಮುನ್ನವೇ ರೇಖಾ ಎಂಬಾಕೆಯ ಹೆಸರು ಕೇಳಿ ಬಂದಿದ್ದು, ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಪತಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೇಖಾ(38),ಈಕೆಯ ಪತಿ ಮಂಜುನಾಥಚಾರಿ(40) ಮತ್ತು ಸ್ನೇಹಿತ ಚೇತನ್(35) ಬಂಧಿತರಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇತ್ತೀಚೆಗೆ ನಿಸಾರ್ ಅಹ್ಮದ್ ಎಂಬವರಿಗೆ 6 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪೈಕಿ ರೇಖಾ ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ಗಳ ಸಂಪರ್ಕ ಹೊಂದಿದ್ದು, ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ದೂರುದಾರ ನಿಸಾರ್ ಅಹ್ಮದ್ ಸಾಲ ಪಡೆಯಲು ರೇಖಾಳನ್ನು ಸಂಪರ್ಕಿಸಿದ್ದರು. ನಿಸಾರ್ ಅಹ್ಮದ್ ಅಪಾರ ಪ್ರಮಾಣದ ಹಣ ಹೊಂದಿರುವ ವಿಚಾರ ರೇಖಾ ಗಮನಕ್ಕೆ ಬಂದಿದೆ. "2009ರಲ್ಲಿ ನಡೆದಿದ್ದ ಕಾರ್ಲ್ಟನ್ ಟವರ್ ಬೆಂಕಿ ದುರಂತದಲ್ಲಿ ನಾನೇ ಪ್ರತ್ಯಕ್ಷ÷್ಯ ಸಾಕ್ಷಿಯಾಗಿದ್ದು, ಸಾಕ್ಷಿ ಹೇಳದಂತೆ ಮಾಲೀಕ ಹಾಗೂ ಇತರರು 25 ಕೋಟಿ ರೂ. ಹಣ ಜಮೆ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ನಾನು ತೆರಿಗೆ ಪಾವತಿ ಮಾಡಬೇಕಿದೆ. ನೀವು 1 ಕೋಟಿ ರೂ. ಕೊಟ್ಟರೆ, 5 ಕೋಟಿ ರೂ. ವಾಪಸ್ ಕೊಡುತ್ತೇನೆ" ಎಂದು ನಿಸಾರ್?ಗೆ ರೇಖಾ ಆಮಿಷವೊಡ್ಡಿದ್ದಳು. ಈ ಮಾತು ನಂಬಿದ ನಿಸಾರ್, ರೇಖಾ ಖಾತೆಗೆ 5.75 ಕೋಟಿ ರೂ. ವರ್ಗಾವಣೆ ಮಾಡಿದ್ದರು. ನಂತರವೂ ಆರೋಪಿ ರೇಖಾ ಹಣಕ್ಕೆ? ಬೇಡಿಕೆಯಿಟ್ಟಾಗ, ತಮ್ಮ ಆಪ್ತರ ಮೂಲಕ ಪರಿಶೀಲಿಸಿದಾಗ ಆಕೆ ವಂಚಕಿ ಎಂಬುದು ಗೊತ್ತಾಗಿದೆ. ಹಣ ಕೇಳಿದಾಗ ರೇಖಾ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಕುರಿತು ನಿಸಾರ್ ಅಹ್ಮದ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
80ಕ್ಕೂ ಹೆಚ್ಚು ವಂಚನೆ ಪ್ರಕರಣಗಳು :ಆರೋಪಿ ರೇಖಾ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯಿದೆ.
ರಾಜಕಾರಣಿಗಳ ಹೆಸರಲ್ಲಿ ವಂಚನೆ:ರಾಜಕಾರಣಿಗಳ ಹೆಸರಿನಲ್ಲೂ ರೇಖಾ ವಂಚಿಸುತ್ತಿದ್ದಳು ಎಂಬುದು ಗೊತ್ತಾಗಿದೆ. ಉತ್ತರ ಕರ್ನಾಟಕದ ಮಾಜಿ ಶಾಸಕರೊಬ್ಬರ ಹೆಸರಿನಲ್ಲೂ ವಂಚಿಸಿದ್ದರು. ಅದೇ ರೀತಿ ಹಾಲಿ ಶಾಸಕರು, ಸಚಿವರ ಜೊತೆ ಪರಿಚಯಸ್ಥಳಂತೆ ಫೋಟೋ ತೆಗೆಸಿಕೊಂಡು, ಬಳಿಕ ಕೆಲ ಉದ್ಯಮಿಗಳಿಗೆ ತೋರಿಸಿ, ಜನಪ್ರತಿನಿಧಿಗಳ ಆಪ್ತರೆಂದು ನಂಬಿಸಿ ಸರ್ಕಾರಿ ಕೆಲಸ ಮಾಡಿಸಿಕೊಡುವುದಾಗಿ ಹಣ ಸುಲಿಗೆ ಮಾಡುತ್ತಿದ್ದಳು ಎಂದು ಗೊತ್ತಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇಖಾ ವಂಚಿಸಿದ್ದು ಹೇಗೆ?:2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ. 25 ಕೋಟಿ ರೂ. ಕೊಡುತ್ತೇನೆ ಅಂದಿದ್ದಾರೆ. ನನ್ನ ಖಾತೆಯಲ್ಲಿದ್ದ 6 ಕೋಟಿ ರೂ. ಇದೆ. ಹೀಗಾಗಿ, ಇಡಿ ಮತ್ತು ಐಟಿ ನನ್ನ ಖಾತೆ ಸೀಜ್ ಮಾಡಿವೆ. ಆದರೆ, ಹಣ ರಿಲೀಸ್ ಮಾಡಿಸೋದಕ್ಕೆ ನನಗೆ ಹಣ ಬೇಕಾಗಿದೆ ಅಂತ ಉದ್ಯಮಿಯನ್ನು ನಂಬಿಸಿ 5.75 ಕೋಟಿ ರೂ. ಪಡೆದಿದ್ದಾಳೆ.
ಶೇರ್ಚಾಟ್ನಲ್ಲಿ ಎಂಜಿನಿಯರ್ಗೆ ಮೋಸ :ರೇಖಾ ವಂಚನೆಯ ಜಾಲ ಇಷ್ಟಕ್ಕೆ ನಿಲ್ಲುವುದಿಲ್ಲ. ವಿಚಾರಣೆ ವೇಳೆ ಮತ್ತಷ್ಟು ಬಯಲಾಗಿದೆ. ಶೇರ್ಚಾಟ್ಮೂಲಕ ಎಂಜಿನಿಯರ್ಗೆ ರೇಖಾ ವಂಚಿಸಿದ್ದಾಳೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ಎಂಜಿನಿಯರ್ ಬಳಿಯಿಂದ 31.10 ಲಕ್ಷ ಹಣ ವಸೂಲಿ ಮಾಡಿದ್ದಾಳೆ. ಈ ಸಂಬಂಧ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಎಂಜಿನಿಯರ್ ದೂರು ನೀಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ರೇಖಾ ಮುಂಬೈನಲ್ಲೇ ಕೂತು ನಿರೀಕ್ಷಣಾ ಜಾಮೀನು ಪಡೆದಿದ್ದಳು.
ಮಾಜಿ ಶಾಸಕ ರಾಜೂಗೌಡ ಹೆಸರಿನಲ್ಲೂ ವಂಚನೆ :ಮಾಜಿ ಶಾಸಕ ರಾಜೂಗೌಡ ಹೆಸರಿನಲ್ಲೂ ವಂಚನೆ ಮಾಡಿರುವುದು ಪತ್ತೆಯಾಗಿದೆ. 2018ರಲ್ಲಿ ಶಾಸಕರಾಗಿದ್ದ ರಾಜುಗೌಡ ಹೆಸರೇಳಿ ಯಾದಗಿರಿಯಲ್ಲಿ ವಂಚನೆ ಮಾಡಿದ್ದಾಳೆ. ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿದ್ದ ಸುರಪುರದ ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿದ್ದಳು. ಅಂದು ರಾಜುಗೌಡ ದೂರಿನ ಮೇರೆಗೆ ರೇಖಾಳನ್ನ ಅರೆಸ್ಟ್ ಮಾಡಲಾಗಿತ್ತು.
6 ಕೋಟಿ ಹಣ ಪಡೆದು ವಂಚಿಸಿದ್ದ ಮೂವರನ್ನು ಸಿಸಿಬಿ ಬಂಧಿಸಿದೆ. ಕಾರ್ಲಟನ್ ಟೌನ್ ಹೆಸರಲ್ಲಿ ಕಥೆ ಸೃಷ್ಟಿಸಿ 7 ಲಕ್ಷ ರೂ. ಕೇಳಿದ್ದಳು. ಬಳಿಕ ಹಂತಹAತವಾಗಿ 5.75 ಕೋಟಿ ರೂ. ಪಡೆದುಕೊಂಡಿದ್ದಳು. ಪ್ರಕರಣ ಸಂಬAಧ ಮಹಿಳೆ ಸೇರಿ ಮೂವರ ಆರೋಪಿಗಳ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೂ ಬಯಲಾಗಿದೆ. ಆರೋಪಿತೆಯ ಬ್ಯಾಂಕ್ ಖಾತೆಯಿಂದ 24 ಕೋಟಿ ರೂ. ವ್ಯವಹಾರ ಆಗಿದೆ. ಆರೋಪಿ ಮಹಿಳೆಯ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಆಕೆ ವಿರುದ್ಧ 5 ವಂಚನೆ ಕೇಸ್, ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಆಕೆಯ ಪತಿ ಮತ್ತು ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
- ಬಿ.ದಯಾನಂದ್, ಪೊಲೀಸ್ ಕಮಿಷನರ್