ಕಲಿಕೆಯ ಜೊತೆ ಪಠ್ಯತರ ಚಟುವಟಿಕೆಗೆ ಆದ್ಯತೆ ನೀಡಿ: ಸಂಜಯ

ಮೂಡಲಗಿ: ಸತತ ಪ್ರಯತ್ನ, ಶ್ರದ್ಧೆ, ಶ್ರಮ, ನಿರಂತರ ಅಧ್ಯಯನದಿಂದಾಗಿ ಯಶಸ್ಸು ಸಾಧ್ಯವಾಗುವದು. ಕಲಿಕೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಆರೋಗ್ಯಯುತ ಶರೀರ ಕಾಯ್ದುಕೊಂಡು ಪರೀಕ್ಷೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಚಿಕ್ಕೋಡಿ ಡೈಟ್‌ನ ಹಿರಿಯ ಉಪನ್ಯಾಸಕ ಸಂಜಯ ಯಾದಗುಡೆ ಹೇಳಿದರು.

promotions

ಅವರು ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪರೀಕ್ಷೆಯ ಭಯ ಆತಂಕಗಳಿಂದ ದೂರವಿದ್ದು, ಆತ್ಮಾಭಿಮಾನದಿಂದ ಪರೀಕ್ಷೆಗಳನ್ನು ಎದುರಿಸ ಬೇಕು. ಮೊದಲನೆಯದಾಗಿ ವಿದ್ಯಾರ್ಥಿ ದಿಸೆಯಲ್ಲಿದ್ದಾಗ ಮಾಡಬಲ್ಲೆ ಎಂಬ ಸ್ವ ಸಾಮರ್ಥ್ಯ ರೂಡಿಸಿಕೊಳ್ಳಬೇಕು.

promotions

ಪರಸ್ಪರ ಹೋಲಿಕೆಯನ್ನು ಮಾಡಿಕೊಳ್ಳದೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಧ್ಯಯನದಲ್ಲಿ ತೋಡಗಿಸಿಕೊಳ್ಳ ಬೇಕು. ಗುಣಾತ್ಮಕ ಚಿಂತನೆಯೊಂದಿಗೆ ಮನೋವಿಜ್ಞಾನಿಗಳ ವಿಚಾರ ಧಾರೆಯಂತೆ ಅಧ್ಯಯನ ಕೈಗೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುದು ಎಂದು ನುಡಿದರು. ತತ್ವಜ್ಞಾನಿಗಳು, ಮನೋವಿಜ್ಞಾನಿಗಳು, ಚಿಂತಕರ ಆಲೋಚನೆಯನುಸಾರ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳಬೇಕು.

ಪ್ರತಿಯೊಬ್ಬರ ಜೀವನದಲ್ಲಿ ವಿವಿಧ ರೀತಿಯಾದ ಪರೀಕ್ಷೆಗಳು ಸದಾ ಕಾಲ ಇರುತ್ತವೆ. ಮೂಡಲಗಿ ಶೈಕ್ಷಣಿಕ ವಲಯವು ಪ್ರತಿ ವರ್ಷವು ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವದು ಸ್ಮರಣಾರ್ಹವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ಪ್ರಥಮದ್ದಾಗಿದ್ದು ಉತ್ತಮ ರೀತಿಯಾಗಿ ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಜುನೇದ ಪಟೇಲ್, ಮುಖ್ಯೋಪಾಧ್ಯಾಯ ಎಮ್ ಎಮ್ ದಬಾಡಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಹೊಂದಿದಾಗ ಮಾತ್ರ ಮುಂದಿನ ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಸಾಧ್ಯವಾಗುವದು. ಶಿಕ್ಷಕರ ಸಹಪಾಠಿಗಳ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಾಯ ಸಹಕಾರದಿಂದ ಅಧ್ಯಯನದಲ್ಲಿ ತೊಡಗಿಕೊಳ್ಳ ಬೇಕು. ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಶ್ರಮವಹಿಸಿ ಅಧ್ಯಯನ ಕೈಗೊಳ್ಳುವ ಮೂಲಕ ತಮ್ಮಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತಾವಿಕವಾಗಿ ಸದಾಶಿವ ಮಾದರ ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ನೀಡಿದರು.

ಸಮಾರಂಭದಲ್ಲಿ ಬಿ.ಇ.ಒ ಅಜಿತ ಮನ್ನಿಕೇರಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಎಸ್.ಆರ್ ಹೆಗಡೆ, ಬಿ.ಎಮ್ ಮಂಗಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಸದಸ್ಯರಾದ ನಿಂಗಪ್ಪ ಪೂಜೇರಿ, ಸುಭಾಸ ದಾಸರ, ಆರೋಗ್ಯ ಇಲಾಖೆಯ ಶಿವಲಿಂಗ ಪಾಟೀಲ, ಸುಭಾಸ ಗೋಡ್ಯಾಗೋಳ, ಚಂದ್ರಶೇಖರ ಪತ್ತಾರ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವ್ಮತ್ತಿತರರು ಉಪಸ್ಥಿತರಿದ್ದರು.

Read More Articles