ದೇಶದ ಶೇ.95% ರಷ್ಟು ಗ್ರಾಮಗಳಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ : ಬಿ.ಎಚ್.ಕೃಷ್ಣಾರೆಡ್ಡಿ

ಬೆಳಗಾವಿ : ದೇಶದಲ್ಲಿ ಲಕ್ಷಾಂತರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಸಹಕಾರಿ ಚಳುವಳಿಗೆ 118 ವರ್ಷಗಳ ಇತಿಹಾಸವಿದೆ ದೇಶದ ಶೇ.95% ರಷ್ಟು ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷರಾದ ಬಿ.ಎಚ್.ಕೃಷ್ಣಾರೆಡ್ಡಿ ಅವರು ತಿಳಿಸಿದ್ದಾರೆ.

promotions

ಆಟೋ ನಗರದಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಳಗಾವಿ ಪ್ರಾಂತೀಯ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭದ ಕುರಿತು ಮಂಗಳವಾರ(ಏಪ್ರಿಲ್ 19) ರಂದು ವಾರ್ತಾ‌ ಇಲಾಖೆಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

promotions

ಕರ್ನಾಟಕದಲ್ಲಿ ಕೇಂದ್ರ ಕಚೇರಿ ಪ್ರಥಮವಾಗಿ ಮಲ್ಲೇಶ್ವರದಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಬೆಳಗಾವಿ ಪ್ರಾಂತ್ಯದಲ್ಲಿ 2544 ಸೌಹಾರ್ದ ಸಹಕಾರಿಗಳು ನೊಂದಣಿಗೊಂಡಿದ್ದು, 2048 ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 561 ಇ-ಸ್ಟ್ಯಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ದ ಬೆಳಗಾವಿ ಪ್ರಾಂತೀಯ ಕಟ್ಟಡ ಪೂರ್ಣಗೊಂಡಿದ್ದು, ಬುಧವಾರ(ಏಪ್ರಿಲ್ 20) ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ ಅವರು ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವರಾದ ಉಮೇಶ ಕತ್ತಿ, ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಅರಭಾವಿ ಶಾಸಕರು ಹಾಗೂ ಕರ್ನಾಟಕ ಹಾಕು ಉತ್ಪಾದಕರ ಮಹಾಮಂಡಳ ನಿ. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ತರಬೇತಿ ಸಂಭಾಂಗಣ ಉದ್ಘಾಟನೆ ಮಾಡುವರು, ಕೆ.ಎಲ್.ಇ ಸಂಸ್ಥೆಯ ಕಾರ್ಯಾದ್ಯಕ್ಷರು ಹಗೂ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ ಅವರು ನ್ಯಾಯಾಲಯ ಸಂಭಾಂಗಣ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು‌.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಬೆಳಗಾವಿ ಲೋಕಸಭಾ ಸಂಸದರಾದ ಮಂಗಳಾ ಅಂಗಡಿ, ಬೆಳಗಾವಿ ಉತ್ತರದ ಶಾಸಕರಾದ ಅನಿಲ ಬೆನಕೆ ಹಾಗೂ ವಿಧಾನ ಪರಿಷತ್, ಮಾಜಿ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ವಿಶೇಷ ಆಹ್ವಾನಿತರಾದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಕಲಬುರಗಿ ಪ್ರಾಂತೀಯ ಕಛೇರಿ ಕಟ್ಟಡದ ವರ್ಚುವಲ್ ಉದ್ಘಾಟನೆಯು ಬುಧವಾರ(ಏಪ್ರಿಲ್ 20)ರಂದು ನಡೆಯಲಿದ್ದು, ಮೈಸೂರು ಪ್ರಾಂತೀಯ ಕಛೇರಿ ಕಟ್ಟಡದ ನಿವೇಶನವನ್ನು ಖರೀದಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷರಾದ ಬಿ.ಎಚ್.ಕೃಷ್ಣಾರೆಡ್ಡಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ದ ವ್ಯವಸ್ಥಾಪಕ ನಿರ್ದೇಶಕರಾದ ಶರಣಗೌಡ ಪಾಟೀಲ, ಪ್ರಾಂತೀಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ, ನಿರ್ದೇಶಕರಾದ ಗುರುನಾಥ್ ಜಾಂತಿಕರ, ವಿಶ್ವನಾಥ ಚ. ಹಿರೇಮಠ ಹಾಗೂ ವಾಯ್.ಟಿ.ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Read More Articles