ಜ್ಞಾನ ಹೆಚ್ಚಿಸಿಕೊಂಡು ಪರಿಣಾಮಕಾರಿಯಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ - ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಸ್ಥಳೀಯ ಸಂಸ್ಥೆಗಳ ಮಹಿಳಾ ಸದಸ್ಯರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಪರಿಣಾಮಕಾರಿಯಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ಮಹಿಳೆಯರು ಸಕ್ರೀಯರಾದಾಗ ಅಭಿವೃದ್ಧಿ ಪದಕ್ಕೆ ಹೊಸ ಭಾಷ್ಯ ಬರೆಯಲು ಸಾಧ್ಯ. ಹಾಗಾಗಿ ಯಾರ ಮೇಲೂ ಅವಲಂಬನೆಯಿಲ್ಲದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.

promotions

 

promotions

ಸ್ಪಂದನ ಸಂಸ್ಥೆ, ಬೆಳಗಾವಿ ಹಾಗೂ ದಿ ಹಂಗರ್ ಪ್ರಾಜೆಕ್ಟ್ ಇಂಡಿಯಾ, ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುಗ್ರಾಮ ಒಕ್ಕೂಟದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ ಚುನಾಯಿತ ಮಹಿಳಾ ಸದಸ್ಯರ ಸಲುವಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಾಯಕತ್ವ ಬಲವರ್ಧನೆ, ಪರಿಣಾಮಕಾರಿ ಪಾತ್ರ ನಿರ್ವಹಣೆ, ಸವಾಲು - ಪರಿಹಾರ - ಸಮಾಲೋಚನೆ ಮೊದಲಾದ ವಿಷಯಗಳ ಕುರಿತು ಇಲ್ಲಿ ಚರ್ಚೆ ಏರ್ಪಡಿಸಲಾಗಿದೆ. ಇದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಸಬಲರಾಗಲು ಸಾಧ್ಯ. ನಿಮ್ಮ ಪರಿಣಾಮಕಾರಿ ಆಡಳಿತ ನಿರ್ವಹಣೆ ದೇಶದ ದಿಕ್ಕನ್ನೇ ಬದಲಿಸಬಲ್ಲದು ಎಂದು ಹೆಬ್ಬಾಳಕರ್ ಹೇಳಿದರು. ಇದೇ ಸಮಯದಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಸಂಪನ್ಮೂಲ ಸಾಮಗ್ರಿ ಎಂಬ ಪುಸ್ತಕವನ್ನು ಸಹ ಹೆಬ್ಬಾಳಕರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸುಗ್ರಾಮ ಒಕ್ಕೂಟದ ಪದಾಧಿಕಾರಿಗಳು, ಸ್ಪಂದನ ಸಂಸ್ಥೆಯ ನಿರ್ದೇಶಕರು ಹಾಗೂ ಸಂಯೋಜಕರು, ವಿದ್ಯಾ ಭದ್ರಕಾಳಿ, ಬಸವರಾಜ ಹೆಗ್ಗನಾಯಕ, ರವೀಂದ್ರ ದನವಾಡಕರ, ಉಮೇಶ ಸಿದ್ನಾಳ, ವಿ. ಸುಶೀಲ, ರತ್ನಪ್ರಭಾ ಹಿರೇಮಠ, ದಿ ಹಂಗರ್ ಪ್ರಾಜೆಕ್ಟ್ ಇಂಡಿಯಾ, ಬೆಂಗಳೂರು ಇದರ ರಾಜ್ಯ ಸಂಯೋಜಕರಾದ ಸೋಮಶೇಖರ, ಸುರೇಖಾ ದೇಸಾಯಿ, ಮಾಯಾ ಲಕ್ಷ್ಮಣ ಲೋಹಾರ ಹಾಗೂ ಗ್ರಾಮ ಪಂಚಾಯತಿಗಳ ಸದಸ್ಯರು ಉಪಸ್ಥಿತರಿದ್ದರು.

Read More Articles