ರೈತರಿಗಾಗಿ ಹೊಸ‌ ಭೂಮಿ ಶಾಖೆ ಆರಂಭಿಸಲಾಗಿದೆ: ಶಾಸಕ ಜಾರಕಿಹೊಳಿ

ಮೂಡಲಗಿ: ಮೂಡಲಗಿ ತಾಲೂಕಿನ ರೈತರ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ಹೊಸದಾಗಿ ಭೂಮಿ ಶಾಖೆಯನ್ನು ಆರಂಭಿಸಲಾಗಿದೆ ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

promotions

ಶನಿವಾರದಂದು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ನೂತನವಾಗಿ ಮೂಡಲಗಿ ತಾಲೂಕಿನ ಭೂಮಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಕಾಕ ತಾಲೂಕಿನಲ್ಲಿದ್ದ ಭೂಮಿ ಶಾಖೆಯನ್ನು ಬೇರ್ಪಡಿಸಿ ಮೂಡಲಗಿ ಹೊಸ ತಾಲೂಕಿಗೆ ಭೂಮಿ ಶಾಖೆಯನ್ನು ತೆರೆದಿದ್ದು, ಮೂಡಲಗಿ ತಾಲೂಕಿನ ಎಲ್ಲ ರೈತ ಭಾಂಧವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು.

promotions

ಮೂಡಲಗಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಪೂರೈಸಿದ್ದರೂ ಇಲ್ಲಿಯತನಕ ಭೂಮಿ ಪಹಣಿ ಪತ್ರಕ್ಕೆ ಮೂಡಲಗಿ ತಾಲೂಕಿನ ನಾಗರಿಕರು ಗೋಕಾಕ ನಗರಕ್ಕೆ ಹೋಗಬೇಕಿತ್ತು, ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಲು ಅಗತ್ಯವಿರುವ ಭೂಮಿ ಶಾಖೆಯನ್ನು ಮೂಡಲಗಿಯಲ್ಲಿಯೇ ಆರಂಭಿಸಲಾಗಿದೆ. ರಾಜ್ಯದಲ್ಲಿಯೇ ಮೂಡಲಗಿ ತಾಲೂಕು ಭೂಮಿ ಶಾಖೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಮೂಡಲಗಿ ತಾಲೂಕಿನ ಸರ್ವಾಂಗಿಣ ಪ್ರಗತಿಗಾಗಿ ಸಾಕಷ್ಟು ಪ್ರಗತಿಪರ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ತಾಲೂಕು ಮಟ್ಟದ ಹೊಸ ಸರಕಾರಿ ಕಚೇರಿಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ, ಡಿಸೆಂಬರ ತಿಂಗಳ ಅಂತ್ಯದೊಳಗೆ ಬಹುತೇಕ ತಾಲೂಕಾ ಮಟ್ಟದ ಕಚೇರಿಗಳನ್ನು ಆರಂಭಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ, ಇನ್ನೊಂದು ವಾರದೊಳಗೆ ಮೂಡಲಗಿ ತಾಲೂಕಿನ ಬಹುನಿರೀಕ್ಷಿತ ಉಪನೋಂದಣಿ ಕಛೇರಿ ಕೂಡಾ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.

ಮೂಡಲಗಿ ಪಟ್ಟಣದ ಮುಖ್ಯ ಮತ್ತು ಒಳ ರಸ್ತೆಗಳು ಸೇರಿದಂತೆ ಅರಭಾವಿ ಮತಕೇತ್ರದ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗುತ್ತಿದೆ, ಎಲ್ಲ ರಸ್ತೆ ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ, ಕೋವಿಡ್-19 ಕಾರಣದಿಂದ ಸರಕಾರದಿಂದ ಅನುದಾನ ಕೊರತೆ ಎದುರಾದ್ದರಿಂದ ಕೆಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಡೆತಡೆಗಳಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿಯವರಿಗೆ ಪಹಣಿ ಪತ್ರ ವಿತರಿಸುವ ಮೂಲಕ ಭೂಮಿ ಶಾಖೆಗೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬೈಲಹೊಂಗಲ ಉಪವಿಭಾಧಿಕಾರಿ ಶಶಿಧರ ಬಗಲಿ, ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ಪಟ್ಟಣದ ಹಲವು ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More Articles