ಹೊರಗುತ್ತಿಗೆ ವಾಹನ ಚಾಲಕರ ಮೇಲಾಗುತ್ತಿರುವ ದೌರ್ಜನ್ಯ ತಡೆಯುವಂತೆ ಒತ್ತಾಯ
- 15 Jan 2024 , 12:43 AM
- Belagavi
- 127
ಬೆಳಗಾವಿ: ಕೊಣ್ಣುರು ಪುರಸಭೆಯಲ್ಲಿ ಪೌರ ಕಾರ್ಮಿಕರ ಮತ್ತು ಹೊರಗುತ್ತಿಗೆ ವಾಹನ ಚಾಲಕರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗೋಕಾಕ ತಾಲೂಕಿನ ಕೊಣ್ಣುರ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರ ವಿಭಾಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆದಾರರಾದ ಶೋಭಾ ಹಾದಿಮನಿ ಇವರು ಸರಕಾರ ನಿಗದಿ ಪಡಿಸಿರುವ ಕನಿಷ್ಠ ವೇತನದಲ್ಲಿ ಹಾಗೂ ಇಎಸ್ಐ ಮತ್ತು ಪಿಎಫ್ ಹೆಚ್ಚಾಗಿ ಪ್ರತಿ ತಿಂಗಳು ಪ್ರತಿಯೊಬ್ಬ ಕಾರ್ಮಿಕನ ಬ್ಯಾಂಕ್ಗೆ ರೂ.13,500 ಜಮಾ ಆಗುತ್ತದೆ. ಆದರೆ ಹೊರಗುತ್ತಿಗೆ ಆಧಾರದ ಶೋಭಾ ಹಾದಿಮನಿ ಹೊರಗುತ್ತಿಗೆ ವಾಹನ ಚಾಲಕರಿಗೆ ಪ್ರತಿ ತಿಂಗಳು ರೂ.6 ಸಾವಿರ ರಿಂದ ರೂ. 7 ಸಾವಿರ ಪ್ರತಿಯೊಬ್ಬ ವಾಹನ ಚಾಲಕರಿಗೆ ನೀಡುತ್ತಿದ್ದಾರೆ. ಇದನ್ನು ಕೂಡ ಏಳೆಂಟು ತಿಂಗಳಿಗೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದರು.

ಕಾರ್ಮಿಕ ಖಾತೆಗೆ ಜಮೆಯಾದ ವೇತನವನ್ನು ಹೊರಗುತ್ತಿಗೆದಾರರ ಮಗ ಶಿವಾನಂದ ಹಾದಿಮನಿ ಓರ್ವ ಕಾರ್ಮಿಕನಾಗಿದ್ದು, ಉಳಿದ ಹೊರಗುತ್ತಿಗೆ ಕಾರ್ಮಿಕರ ಮೇಲೆ ದಬ್ಬಾಳಿಕೆಯ ದರ್ಪದಿಂದ ದಿನಕ್ಕೆ 10 ರಿಂದ 12 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಮತ್ತು ಕಾರ್ಮಿಕರ ಖಾತೆಗೆ ಜಮೆಯಾದ ಹಣವನ್ನು ಅವರಿಗೆ ಹೆದರಿಸಿ ವಸೂಲಿ ಮಾಡುತ್ತಾನೆ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಂಜುಳಾ ರಾಮನಕಟ್ಟಿ, ಸಂತೋಷ ಶಿಂಧೆ, ಯಲ್ಲಪ್ಪ ಕಾಂಬಳೆ, ದೀಪಕ ಮೊಟೆಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










