ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ: ಹಂಜಾಟೆ

ಮೂಡಲಗಿ : ವಿದ್ಯಾರ್ಥಿ ಜೀವನದಲ್ಲಿಯೇ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿವೆ. ಅತೀ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಉಜ್ವಲವಾದ ಭವಿಷ್ಯವನ್ನು ನಿರ್ಮಿಸಿಕೋಳ್ಳಲು ಸಾದ್ಯ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಅಭಿಪ್ರಾಯ ವ್ಯಕ್ತಪಡಿಸಿದರು.

promotions

ಅವರು ಶನಿವಾರ ಪಟ್ಟಣದ ಬಾಗೋಜಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ ತರಗತಿ ಶಿಕ್ಷಕರ ಹಾಗೂ ಎನ್.ಎನ್.ಎಮ್.ಎಸ್ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

promotions

ಕಲಿಕೆಯ ಫಲಶೃತಿ ನೋಡಬೇಕಾದರೆ ಪರೀಕ್ಷೆಗಳು ಮಾನದಂಡವಾಗಿವೆ. ಫಲಿತಾಂಶದಲ್ಲಿ ಗುಣಮಟ್ಟದ ಹಾಗೂ ವಿಶೇಷ ಪ್ರಗತಿಯನ್ನು ಕಾಣಬೇಕು. ಎನ್.ಎನ್.ಎಮ್.ಎಸ್ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ ೧೬೯ ವಿದ್ಯಾರ್ಥಿಗಳು ಅರ್ಹತೆಪಡೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ಮೂಡಲಗಿ ವಲಯ ಅತೀ ಹೆಚ್ಚು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾಖಲಾಗುವದರ ಜೊತೆಗೆ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವದು ಗಮನಾರ್ಹವಾಗಿದೆ. ಶೈಕ್ಷಣಿಕ ವಲಯದ ಪ್ರಗತಿಗೆ ಪ್ರಮುಖವಾಗಿ ಇಲ್ಲಿಯ ಶಿಕ್ಷಕ ಸಮೂಹದ ಕಾರ್ಯ ಮೆಚ್ಚುವಂತಹದು. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸಹಾಯ ಸಹಕಾರ ಇಲಾಖೆ ಮೆಚ್ಚುವಂತಹದು. ಶಿಕ್ಷಕರ ಕೊರತೆಯ ಹಿನ್ನೇಲೆಯಲ್ಲಿ ಸ್ವತಃ ಅತಿಥಿ ಶಿಕ್ಷಕರನ್ನು ನೀಡುವ ಮೂಲಕ ಅವರು ಶೈಕ್ಷಣಿಕ ಪ್ರಗತಿಗೆ ಸಹಕಾರ ಮೂರ್ತಿಗಳಾಗಿದ್ದಾರೆ ಎಂದರು.

ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಯಾಗಲು ಸಂಪನ್ಮೂಲ ಶಿಕ್ಷಕರ ಹಾಗೂ ಮಾರ್ಗದರ್ಶಕರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮೂಡಲಗಿ ವಲಯ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯವಾಗುವಲ್ಲಿ ಯಶಸ್ವಿಯಾಗಿದೆ. ಎನ್.ಟಿ.ಎಸ್.ಸಿ ಪ್ರತಿಭಾನ್ವೇಷನೆ ಪರೀಕ್ಷೆಗಳು ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಇರುವದರಿಂದ ಅದರ ಪೂರ್ವಭಾವಿ ತಯಾರಿ ಮಾಡಿಕೊಳ್ಳಬೇಕು. ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿರುವದರಿಂದ ಕಠಿಣತೆಯಿಂದ ಕೂಡಿದ್ದು, ಉತ್ತಮ ಫಲಿತಾಂಶ ಪಡೆದರೆ ಉನ್ನತ ವ್ಯಾಸಂಗ ಮುಗಿಯುವವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶಿಷ್ಯ ವೇತನ ನೀಡುತ್ತದೆ.

ಸರಕಾರದ ಹತ್ತು ಹಲವು ಯೋಜನೆಗಳು ಶಿಕ್ಷಣ ಇಲಾಖೆಗೆ ನೀಡಿದ್ದು ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಯಶಸ್ವಿ ಜೀವನ ರೂಪಿಸಿಕೊಳ್ಳಬೇಕು. ಶಿಕ್ಷಕ ಸಮೂಹ ಅಗತ್ಯ ಸೂಚನೆ ಹಾಗೂ ಮಾರ್ಗದರ್ಶನ ಪಡೆದು ಇಲಾಖೆಯ ಆಶೋತ್ತರಗಳನ್ನು ಪರಿಹಾರ ನೀಡಬೇಕು ಎಂದು ನುಡಿದರು.

ಚಿಕ್ಕೋಡಿ ಜಿಲ್ಲಾ ಉಪಸಮನ್ವಯಾಧಿಕಾರಿ ದೀಪಕ ಕುಲಕರ್ಣಿ ಮಾತನಾಡಿ, ಶಿಕ್ಷಕರ ಸಾಮರ್ಥ್ಯಗಳು ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ. ವರ್ಗ ಕೊಣೆಯಲ್ಲಿ ಹೇಳುವ ಹಾಗೂ ಪರಿಹಾರ ಕ್ರಮದ ಮೇಲೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ಕಲಿಕಾ ಮಟ್ಟ ಹೆಚ್ಚುತ್ತದೆ. ಸರಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆಮಾಡಿಕೊಂಡು ವಿದ್ಯಾರ್ಥಿಗಳು ಶಿಕ್ಷಕ ಸಮೂಹ ಉತ್ತಮ ಪ್ರಪಂಚ ನಿರ್ಮಾಣಮಾಡುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಬಿಇಒ ಅಜಿತ ಮನ್ನಿಕೇರಿ ಪ್ರಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳು ಮುಂದೆ ಕೈಗೊಂಡಿರುವ ಕಾರ್ಯಗಳ ಕುರಿತು ವಿವರಿಸಿದರು.

ಬಾಗೋಜಿ ಶಿಕ್ಷಣ ಸಂಸ್ಥೆಯ ಶಶಿಕಾಂತ ಬಾಗೋಜಿ ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಾಗಾರದಲ್ಲಿ ಬಿಆರ್.ಸಿ ಸಮನ್ವಯಾಧಿಕಾರಿ ರೇಣುಕಾ ಆಣಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಜುನೇದಿ ಪಟೇಲ್, ಶಿಕ್ಷಣ ಸಂಯೋಜಕರಾದ ಕರಿಬಸವರಾಜು ಟಿ, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ ಹಾಗೂ ಎಸ್.ಎಸ್.ಎಲ್.ಸಿ ತರಗತಿ ಶಿಕ್ಷಕರು ಮತ್ತು ಎನ್.ಎನ್.ಎಮ್.ಎಸ್ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಹಾಗೂ ಪಾಲಕರಿದ್ದರು.

Read More Articles