ಕಾನೂನು ಪಾಲನೆ ಜೊತೆಗೆ ಅಧಿಕಾರಿಗಳಿಗೆ ಮಾನವೀಯತೆಯೂ ಮುಖ್ಯ - ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
- 15 Jan 2024 , 3:22 AM
- Belagavi
- 88
ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ಆಟೋ ಹಾಗೂ ಟಿಂಪೊ ಟ್ರಾವೆಲರ್ಸ್ ಚಾಲಕರಿಗಾಗುತ್ತಿರುವ ತೊಂದರೆಗಳ ಕುರಿತು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಆಟೋ ಚಾಲಕರು ಹಾಗೂ ಟೆಂಪೋ ಚಾಲಕರು ಶ್ರಮ ಜೀವಿಗಳು. ಕಷ್ಟಪಟ್ಟು ದುಡಿದು ಕುಟುಂಬ ನಿರ್ವಹಣೆ ಜೊತೆಗೆ ವಾಹನದ ಸಾಲ ಮರುಪಾವತಿಸಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ಅವರಿಗೆ ಕಾನೂನು ತಿಳಿವಳಿಕೆ ನೀಡುವ ಜೊತೆಗೆ ಸೌಹಾರ್ಧಯುತವಾಗಿ ವರ್ತಿಸಬೇಕು. ಮನಸ್ಸಿಗೆ ಬಂದಂತೆ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಕೆಲಸವನ್ನು ಮಾಡಬಾರದು. ಕಾನೂನು ಪಾಲಿಸುವ ಜೊತೆಗೆ ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದರು.

ಮಳೆ, ಗಾಳಿ, ಚಳಿ ಎನ್ನದೆ ಬಡವರು ಕುಟುಂಬ ನಿರ್ವಹಣೆಗಾಗಿ ಕೆಲಸ ನಿರ್ವಹಿಸುತ್ತಾರೆ. ಕಾನೂನು ಉಲ್ಲಂಘನೆಯಾದಲ್ಲಿ ಅವರನ್ನು ಎಜುಕೇಟ್ ಮಾಡುವ ಕೆಲಸ ಮಾಡಿ. ಒಮ್ಮೆಲೆ ದೊಡ್ಡ ಪ್ರಮಾಣದಲ್ಲಿ ದಂಡ ಹಾಕಿದರೆ, ಒಂದೇ ತಪ್ಪಿಗೆ ಹಲವು ರೀತಿಯಲ್ಲಿ ಪ್ರಕರಣ ದಾಖಲಿಸಿ ದಂಡ ಹಾಕಿದರೆ ಅವರು ಹೇಗೆ ಜೀವನ ಸಾಗಿಸಬೇಕು? ಮಾನವೀಯತೆಯ ನೆಲೆಯಲ್ಲಿ ಅವರೊಂದಿಗೆ ವರ್ತಿಸಬೇಕು. ಯಾರಿಗೂ ತೊಂದರೆಯಾಗದಂತೆ ನಿಮ್ಮ ಕರ್ತವ್ಯ ಪಾಲಿಸಿ ಎಂದು ಸಲಹೆ ನೀಡಿದರು. ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿದ್ದರು.










